Publish Date: Wed, 12 Feb 2020 (07:38 IST)
Updated Date: Wed, 12 Feb 2020 (07:40 IST)
ಬೇ ಓವಲ್: ನ್ಯೂಜಿಲೆಂಡ್ ವಿರುದ್ಧ ಮೂರೂ ಏಕದಿನ ಪಂದ್ಯಗಳನ್ನು ಸೋತ ಟೀಂ ಇಂಡಿಯಾ ಹೀನಾಯ ಪ್ರದರ್ಶನದೊಂದಿಗೆ ಸರಣಿ ಮುಕ್ತಾಯಗೊಳಿಸಿದೆ. ವೈಟ್ ವಾಶ್ ಅವಮಾನ ಅನುಭವಿಸಲು ಪ್ರಮುಖವಾಗಿ ಕಾರಣವಾಗಿದ್ದು
ಈ ಇಬ್ಬರು ಕ್ರಿಕೆಟಿಗರು ಎಂದರೂ ತಪ್ಪಾಗಲಾರದು.
ಗಾಯದ ಬಳಿಕ ತಂಡಕ್ಕೆ ಮರಳಿದ ಜಸ್ಪ್ರೀತ್ ಬುಮ್ರಾ ಮೇಲೆ ಟೀಂ ಇಂಡಿಯಾಗೆ ಅತಿಯಾದ ನಿರೀಕ್ಷೆಯಿತ್ತು. ಆದರೆ ಬುಮ್ರಾ ಮೂರೂ ಪಂದ್ಯಗಳಲ್ಲೂ ಫ್ಲಾಪ್ ಶೋ ನೀಡಿದ್ದು ಭಾರತಕ್ಕೆ ಮುಳುವಾಯಿತು. ತಂಡಕ್ಕೆ ಬೇಕಾಗಿದ್ದ ಆರಂಭಿಕ ವಿಕೆಟ್ ಕೀಳಲು ಅಥವಾ ರನ್ ಗತಿ ನಿಯಂತ್ರಿಸಲು ಬುಮ್ರಾ ವಿಫಲರಾದರು. ಪರಿಣಾಮ ನ್ಯೂಜಿಲೆಂಡ್ ಪ್ರತೀ ಪಂದ್ಯದಲ್ಲೂ ಉತ್ತಮ ಆರಂಭ ಪಡೆಯಿತು. ಅದಕ್ಕೆ ಅನುಗುಣವಾಗಿ ಉಳಿದ ಬ್ಯಾಟ್ಸ್ ಮನ್ ಗಳು ಉತ್ತಮ ಸ್ಕೋರ್ ಮಾಡಿದರು.
ಇನ್ನು ಸರಣಿಯ ಆರಂಭಕ್ಕೂ ಮೊದಲೇ ಟೀಂ ಇಂಡಿಯಾ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ರ ಸೇವೆಯಿಂದ ವಂಚಿತವಾಗಿತ್ತು. ಇವರಿಬ್ಬರ ಅನುಪಸ್ಥಿತಿಯಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕುವ ಹೊಣೆಗಾರಿಕೆ ವಿರಾಟ್ ಕೊಹ್ಲಿ ಮೇಲಿತ್ತು. ಆದರೆ ಕೊಹ್ಲಿ ಕಳೆದ ಮೂರೂ ಪಂದ್ಯಗಳಲ್ಲಿ ಜುಜುಬಿ ಮೊತ್ತಕ್ಕೆ ಔಟಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇದರಿಂದಾಗಿ ಕೆಳ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮೇಲೆ ಹೆಚ್ಚಿನ ಒತ್ತಡ ಬಿತ್ತು. ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದೇ ಟೀಂ ಇಂಡಿಯಾ ಸರಣಿ ಸೋಲು ಅನುಭವಿಸಿತು.