Publish Date: Sun, 14 Mar 2021 (10:16 IST)
Updated Date: Sun, 14 Mar 2021 (10:24 IST)
ಮುಂಬೈ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ದೆಹಲಿಯಲ್ಲಿ ನಡೆಯುತ್ತಿದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಉತ್ತರ ಪ್ರದೇಶ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 16 ಓವರ್ ಗಳಲ್ಲಿ 68 ರನ್ ಗಳಿಸಿದೆ.
ಮುಂಬೈ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಉತ್ತರ ಪ್ರದೇಶ ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಿದ್ದು, ವಿಕೆಟ್ ಕಾಯ್ದುಕೊಂಡಿದೆ. ಆರಂಭಿಕ ಮಾಧವ್ ಕೌಶಿಕ್ 40, ಸಮರ್ಥ್ ಸಿಂಗ್ 22 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಈ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಮುಂಬೈ ಬ್ಯಾಟ್ಸ್ ಮನ್ ಪೃಥ್ವಿ ಶಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಳೆದ ಪಂದ್ಯದಲ್ಲಿ ಕರ್ನಾಟಕ ವಿರುದ್ಧವೂ ಸ್ಪೋಟಕ ಬ್ಯಾಟಿಂಗ್ ನಡೆಸಿ ಶತಕ ಗಳಿಸಿದ್ದ ಪೃಥ್ವಿ ಈ ಋತುವಿನ ಗರಿಷ್ಠ ರನ್ ಸಂಪಾದಿಸಿದ್ದಾರೆ. ಫೈನಲ್ ಪಂದ್ಯದಲ್ಲೂ ಅವರು ರನ್ ಗಳಿಸಲು ಯಶಸ್ವಿಯಾದರೆ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.