Publish Date: Tue, 08 Oct 2024 (10:04 IST)
Updated Date: Tue, 08 Oct 2024 (10:06 IST)
ಬೆಂಗಳೂರು: ಸತತ ಎರಡನೇ ವರ್ಷ ಬಡ ವಿದ್ಯಾರ್ಥಿಯ ಶಿಕ್ಷಣ ಶುಲ್ಕ ಪಾವತಿಸಿ ಕರ್ನಾಟಕ ಮೂಲದ ಕ್ರಿಕೆಟಿಗ ಕೆಎಲ್ ರಾಹುಲ್ ಎಲ್ಲರ ಮನಗೆದ್ದಿದ್ದಾರೆ. ಬಿಕಾಂ ಓದುತ್ತಿರುವ ಅಮೃತ್ ಮಾವಿನಕಟ್ಟೆ ಎಂಬ ವಿದ್ಯಾರ್ಥಿಗೆ ರಾಹುಲ್ ನೆರವಾಗಿದ್ದಾರೆ.
ಕಳೆದ ವರ್ಷ ಮೊದಲ ವರ್ಷದ ಶುಲ್ಕ ಪಾವತಿಸಿದ್ದ ಕೆಎಲ್ ರಾಹುಲ್, ಎರಡನೇ ವರ್ಷದ ಶುಲ್ಕವನ್ನೂ ಭರಿಸುವುದಾಗಿ ಭರವಸೆ ನೀಡಿದ್ದರು. ರಾಹುಲ್ ತಾವು ಈ ಹಿಂದೆ ಕೊಟ್ಟ ಮಾತನ್ನು ಮರೆತಿರಲಿಲ್ಲ. ಇದೀಗ 3 ನೇ ಮತ್ತು ನಾಲ್ಕನೇ ಸೆಮಿಸ್ಟರ್ ನ 75,504 ರೂ. ಪಾವತಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಅಮೃತ್ ಮೂಲತಃ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದವರು. ಉತ್ತಮ ಅಂಕ ಪಡೆದಿದ್ದರೂ ಅವರಿಗೆ ಪದವಿ ಶಿಕ್ಷಣಕ್ಕೆ ಕಾಲೇಜಿಗೆ ಸೇರಲು ದುಡ್ಡಿನ ಕೊರತೆಯಾಗಿತ್ತು. ಅವರ ಪರಿಸ್ಥಿತಿ ಸಂಘಟನೆಯೊಂದರ ಮೂಲಕ ಕೆಎಲ್ ರಾಹುಲ್ ಗೆ ತಿಳಿಯಿತು.
ತಕ್ಷಣವೇ ಅವರು ವಿದ್ಯಾರ್ಥಿಯ ಮೊದಲ ವರ್ಷದ ಶುಲ್ಕ ಪಾವತಿಸಿದ್ದಲ್ಲದೆ, ಮುಂದೆಯೂ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ರಾಹುಲ್ ನೀಡಿದ ಸಹಾಯದಿಂದಾಗಿ ಮೊದಲ ವರ್ಷ ಉತ್ತಮ ಅಂಕಗಳೊಂದಿಗೆ ಪೂರ್ತಿ ಮಾಡಿರುವ ಅಮೃತ್ ಈಗ ದ್ವಿತೀಯ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಅಂದು ನೀಡಿದ ಭರವಸೆಯನ್ನು ಮರೆಯದೇ ರಾಹುಲ್ ಈಗ ಎರಡನೇ ವರ್ಷಕ್ಕೂ ಸಹಾಯ ಮಾಡಿದ್ದಾರೆ.