ಕೋಲ್ಕೊತ್ತಾ: ಎರಡನೇ ಏಕದಿನ ಪಂದ್ಯಕ್ಕಾಗಿ ಕೋಲ್ಕೊತ್ತಾಗೆ ಬಂದಿಳಿದ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ಇದೀಗ ವರುಣನ ಕಾಟ. ಅಭ್ಯಾಸ ಮಾಡಲು ಸಾಧ್ಯವಾಗದೇ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.
ಮಳೆಯಿಂದಾಗಿ ಭಾರತ ತಂಡ ಅಭ್ಯಾಸ ಮಾಡಲಿಲ್ಲ. ಆದರೆ ಆಸ್ಟ್ರೇಲಿಯಾ ತಂಡ ಒಳಾಂಗಣ ಮೈದಾನದಲ್ಲಿ ಅಭ್ಯಾಸ ನಡೆಸಿದೆ. ಕಳೆದ ಎರಡು ದಿನಗಳಿಂದ ಮಳೆಯಿಂದಾಗಿ ಮೈದಾನವನ್ನು ಹೊದಿಕೆಯಿಂದ ಮುಚ್ಚಲಾಗಿದೆ. ನಾಳೆ ದ್ವಿತೀಯ ಪಂದ್ಯ ನಡೆಯಲಿದ್ದು, ಅಷ್ಟರಲ್ಲಿ ಮೈದಾನ ಸಜ್ಜಾಗುವ ನಿರೀಕ್ಷೆಯಿದೆ.
ಆದರೆ ನಾಳೆಯೂ ಮಳೆ ಬಂದರೆ ಪಂದ್ಯ ನಡೆಯುವುದೇ ಅನುಮಾನವಾಗಿದೆ. ಮಳೆ ಬಂದು ಮೈದಾನ ಒದ್ದೆಯಾದ ಕಾರಣ ಆಟಗಾರರು ಹೊರಾಂಗಣ ಮೈದಾನದಲ್ಲಿ ಅಭ್ಯಾಸ ನಡೆಸಿದರೆ ಗಾಯಗಳಾಗುವ ಅಪಾಯ ಹೆಚ್ಚು. ಹೀಗಾಗಿ ಆಟಗಾರರು ಮರಳಿ ಹೋಟೆಲ್ ಕೊಠಡಿಗೆ ತೆರಳಿದರು ಎಂದು ಟೀಂ ಇಂಡಿಯಾ ಮೂಲಗಳು ಹೇಳಿವೆ.