Publish Date: Sun, 19 Jan 2020 (09:39 IST)
Updated Date: Sun, 19 Jan 2020 (09:41 IST)
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ನಿರ್ಣಾಯಕ ಮತ್ತು ಅಂತಿಮ ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲಗೊಂಡಿದೆ. ನಾಯಕ ವಿರಾಟ್ ಕೊಹ್ಲಿಗೆ ಬೆಂಗಳೂರು ಒಂದು ರೀತಿಯಲ್ಲಿ ಎರಡನೇ ತವರಿದ್ದಂತೆ. ಇಲ್ಲಿ ಕೊಹ್ಲಿ ಮತ್ತು ಬಳಗಕ್ಕೆ ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೇಳಿ ಕೇಳಿ ಕೆಎಲ್ ರಾಹುಲ್, ಮನೀಶ್ ಪಾಂಡೆಗೂ ತವರು. ಹೀಗಾಗಿ ಉತ್ಸಾಹ ಜೋರಾಗಿಯೇ ಇರುತ್ತದೆ.
ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಕಳೆದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಸಮತೋಲಿತ ಪ್ರದರ್ಶನ ಬಂದಿದ್ದರಿಂದ ಅದೇ ತಂಡದೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ. ಪಂದ್ಯ ಹಗಲು ರಾತ್ರಿಯಾಗಿ ನಡೆಯಲಿದ್ದು ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.