Publish Date: Tue, 06 Aug 2024 (11:14 IST)
Updated Date: Tue, 06 Aug 2024 (11:16 IST)
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಕೆಎಲ್ ರಾಹುಲ್ ಭಾರೀ ಟೀಕೆಗೊಳಗಾಗಿದ್ದರು. ಇದೀಗ ಮೂರನೇ ಪಂದ್ಯಕ್ಕೆ ರಾಹುಲ್ ರನ್ನು ಕಿತ್ತು ಹಾಕಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಟೀಂ ಇಂಡಿಯಾದಲ್ಲಿ ಈಗ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ನಡುವೆ ಪೈಪೋಟಿಯಿದೆ. ಮೊದಲ ಎರಡು ಪಂದ್ಯಕ್ಕೆ ರಿಷಬ್ ಕಡೆಗಣಿಸಿ ಕೆಎಲ್ ರಾಹುಲ್ ಗೆ ಅವಕಾಶ ನೀಡಿದ್ದಕ್ಕೇ ರಿಷಬ್ ಪಂತ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು.
ಆದರೆ ಕೆಎಲ್ ರಾಹುಲ್ ಅನುಭವದಲ್ಲಿ ಪಂತ್ ಗಿಂತಹ ಹಿರಿಯ ಆಟಗಾರ. ಜೊತೆಗೆ ಅವರ ದಾಖಲೆಯೂ ಉತ್ತಮವಾಗಿದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಎರಡೂ ಪಂದ್ಯಗಳಲ್ಲಿ ತೀರಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ರಾಹುಲ್ ಗೆ ಯಶಸ್ಸು ಸಿಗಲಿಲ್ಲ.
ಇದೀಗ ಮೂರನೇ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಿರುವಾಗ ತಂಡದಿಂದ ರಾಹುಲ್ ಗೆ ಕೊಕ್ ಕೊಟ್ಟು ರಿಷಬ್ ಗೆ ಅವಕಾಶ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ. ಇದು ರಾಹುಲ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಹಬುದು. ಈಗಾಗಲೇ ರಾಹುಲ್ ಟಿ20 ಕ್ರಿಕೆಟ್ ನಿಂದ ಕಡೆಗಣಿಸಲ್ಪಟ್ಟಿದ್ದಾರೆ. ಆದರೆ ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಅವರು ಅನುಭವಿ ಆಟಗಾರರಾಗಿ ಉಳಿದುಕೊಂಡಿದ್ದಾರೆ.