ಅಹ್ಮದಾಬಾದ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಐದನೇ ಮತ್ತು ಅಂತಿಮ ಟಿ20 ಪಂದ್ಯ ಇಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಉಪನಾಯಕ ಶುಭಮನ್ ಗಿಲ್ ಗಾಯದಿಂದಾಗಿ ಗೈರಾಗಲಿದ್ದು, ತಂಡಕ್ಕೆ ಅವರ ಅನುಪಸ್ಥಿತಿ ಕಾಡಲಿದೆಯೇ?
ಕಳೆದ ಪಂದ್ಯ ಪ್ರತಿಕೂಲ ಹವಾಮಾನದಿಂದಾಗಿ ರದ್ದಾಗಿತ್ತು. ಈಗಾಗಲೇ ಸರಣಿಯಲ್ಲಿ 2-1 ರಿಂದ ಮುನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಇಂದು ಗೆದ್ದರೆ ಸರಣಿ ಸೋತರೆ ಸರಣಿ ಸಮಬಲ ಎನ್ನುವ ಸ್ಥಿತಿ. ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಭಾರತಕ್ಕೆ ಇಂದು ಗೆಲುವು ಅನಿವಾರ್ಯವಾಗಿದೆ.
ಇನ್ನು, ಭಾರತ ತಂಡದಲ್ಲಿ ಗಾಯಾಳುಗಳದ್ದೇ ಚಿಂತೆಯಾಗಿದೆ. ಅಕ್ಸರ್ ಪಟೇಲ್ ಗೆ ಅನಾರೋಗ್ಯವಾಗಿ ಟೂರ್ನಿಯಿಂದ ಹೊರಬಿದ್ದಿದ್ದರೆ ಉಪನಾಯಕ ಶುಭಮನ್ ಗಿಲ್ ಕೂಡಾ ಪಾದದ ಗಾಯದಿಂದ ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು.
ಆದರೆ ಗಿಲ್ ಅನುಪಸ್ಥಿತಿ ಭಾರತಕ್ಕೆ ಕಾಡದು. ಯಾಕೆಂದರೆ ಗಿಲ್ ಇದುವರೆಗೆ ಟಿ20 ಪಂದ್ಯಗಳಲ್ಲಿ ಓಪನರ್ ಆಗಿ ಮಾಡಿದ ಸಾಧನೆ ಅಷ್ಟಕ್ಕಷ್ಟೇ. ಅವರಿಂದಲೇ ತಂಡಕ್ಕೆ ಉತ್ತಮ ಆರಂಭ ದೊರಕುತ್ತಿರಲಿಲ್ಲ. ಇದೀಗ ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಆಡುವ ಅವಕಾಶ ಪಡೆಯುವ ಸಾಧ್ಯತೆಯಿದ್ದು ಅದನ್ನು ಅವರು ಬಳಸಿಕೊಂಡರೆ ಲಾಭವಾಗಲಿದೆ. ಇಂದಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.