ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವೂ ನಿನ್ನೆ ಮುಕ್ತಾಯವಾಗಿದೆ. ಇದೀಗ ಮೂರನೇ ಪಂದ್ಯಕ್ಕೆ ಈ ಇಬ್ಬರು ಕನ್ನಡಿಗರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಜುಲೈ 10 ರಿಂದ 14 ರವರೆಗೆ ನಡೆಯಲಿದೆ. ಭಾರತ ತಂಡಕ್ಕೆ ಈಗ ಮೂರೇ ದಿನಗಳಲ್ಲಿ ಮತ್ತೊಂದು ಪಂದ್ಯಕ್ಕೆ ಅಣಿಯಾಗಬೇಕಿದೆ.
ಮೂಲಗಳ ಪ್ರಕಾರ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆಗಳಾಗಲಿವೆ. ಅದರಲ್ಲೂ ಇಬ್ಬರು ಕನ್ನಡಿಗ ಆಟಗಾರರಿಗೆ ಗೇಟ್ ಪಾಸ್ ದೊರೆಯಲಿದೆ ಎನ್ನಲಾಗುತ್ತಿದೆ. ಬೌಲರ್ ಪ್ರಸಿದ್ಧ ಕೃಷ್ಣ ಮತ್ತು ಬ್ಯಾಟಿಗ ಕರುಣ್ ನಾಯರ್ ಗೆ ಕೊಕ್ ನೀಡುವ ಸಾಧ್ಯತೆಯಿದೆ.
ಈ ಇಬ್ಬರೂ ಕಳೆದ ಎರಡೂ ಪಂದ್ಯಗಳಲ್ಲಿ ತೋರಿದ ಕಳಪೆ ನಿರ್ವಹಣೆ ಟೀಕೆಗೆ ಕಾರಣವಾಗಿದೆ. ಅದರಲ್ಲೂ ಪ್ರಸಿದ್ಧ ಕೃಷ್ಣ ಕಳೆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದಲ್ಲದೆ, ರನ್ ನೀಡಿ ದುಬಾರಿಯೆನಿಸಿದ್ದರು. ಎರಡನೇ ಇನಿಂಗ್ಸ್ ನಲ್ಲೂ ಅವರು ಪರಿಣಾಮಕಾರಿ ಬೌಲಿಂಗ್ ಮಾಡಿಲ್ಲ.
ಇನ್ನು ಕರುಣ್ ನಾಯರ್ ಕೂಡಾ ಹಲವು ವರ್ಷಗಳ ನಂತರ ತಂಡಕ್ಕೆ ಆಯ್ಕೆಯಾದರೂ ಅದಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ. ಹೀಗಾಗಿ ಮುಂದಿನ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ವಾಪಸ್ ಆದರೆ ಪ್ರಸಿದ್ಧ ಕೃಷ್ಣ ಸ್ಥಾನ ಕಳೆದುಕೊಳ್ಳಬಹುದು. ಆಕಾಶ್ ದೀಪ್ ಅದ್ಭುತ ಬೌಲಿಂಗ್ ಮಾಡಿದ್ದು ಸ್ಥಾನ ಉಳಿಸಿಕೊಳ್ಳಲಿದ್ದಾರೆ.