ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೇಳಿದ ಮಾತು ಇಂಗ್ಲೆಂಡ್ ಭಯ ಹೆಚ್ಚಿಸಲಿದೆ.
ದ್ವಿತೀಯ ಟೆಸ್ಟ್ ಪಂದ್ಯವನ್ನು 336 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಎಜ್ ಬಾಸ್ಟನ್ ನಲ್ಲಿ ದೊಡ್ಡ ರನ್ ಅಂತರದ ಗೆಲುವು ಸಾಧಿಸಿತು. ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 271 ರನ್ ಗಳಿಗೆ ಆಲೌಟ್ ಆಯಿತು. ಎರಡೂ ಪಂದ್ಯಗಳಲ್ಲಿ ಮೂರಂಕಿ ಗಳಿಸಿದ ನಾಯಕ ಶುಭಮನ್ ಗಿಲ್ ಪಂದ್ಯಶ್ರೇಷ್ಠರಾದರು.
ಈ ಪಂದ್ಯದಲ್ಲಿ ಹೈಲೈಟ್ ಆಗಿದ್ದು ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಬೌಲಿಂಗ್. ಮೊದಲನೇ ಇನಿಂಗ್ಸ್ ನಲ್ಲಿ ಸಿರಾಜ್ ಎರಡನೇ ಇನಿಂಗ್ಸ್ ನಲ್ಲಿ ಆಕಾಶ್ ದೀಪ್ ಐದು ವಿಕೆಟ್ ಗಳ ಗೊಂಚಲು ಪಡೆದು ಭಾರತದ ಗೆಲುವಿಗೆ ಕಾರಣರಾದರು.
ಇದರ ನಡುವೆ ಮೂರನೇ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅವರೂ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ಇದು ಇಂಗ್ಲೆಂಡ್ ಗೆ ಭಯ ಹೆಚ್ಚಿಸಲಿದೆ. ಬುಮ್ರಾ ಇದೀಗ ಹಾಲಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬೌಲರ್. ಮೊದಲ ಟೆಸ್ಟ್ ಪಂದ್ಯದಲ್ಲೂ 5 ವಿಕೆಟ್ ಕಬಳಿಸಿ ಇಂಗ್ಲೆಂಡ್ ಗೆ ಕಂಟಕವಾಗಿದ್ದರು. ಆದರೆ ಅವರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಎರಡನೇ ಪಂದ್ಯದಿಂದ ಹೊರಗುಳಿದರು. ಆದರೆ ಈಗ ಮೂರನೇ ಪಂದ್ಯಕ್ಕೆ ಸಿರಾಜ್-ಆಕಾಶ್ ದೀಪ್ ಸಾಲದು ಎಂಬಂತೆ ಬುಮ್ರಾ ಕೂಡಾ ಬೌಲಿಂಗ್ ವಿಭಾಗಕ್ಕೆ ಸೇರ್ಪಡೆಯಾದರೆ ಭಾರತ ಮತ್ತಷ್ಟು ಬಲಾಢ್ಯವಾಗಲಿದೆ. ಇದು ಖಂಡಿತಾ ಇಂಗ್ಲೆಂಡ್ ಗೆ ತಲೆನೋವಾಗಲಿದೆ.