Publish Date: Wed, 12 Sep 2018 (09:37 IST)
Updated Date: Wed, 12 Sep 2018 (09:41 IST)
ದಿ ಓವಲ್: ಒಂದು ಕಡೆ ಟೀಂ ಇಂಡಿಯಾದ ಘಟಾನುಘಟಿ ಬ್ಯಾಟ್ಸ್ ಮನ್ ಗಳೆಲ್ಲಾ ಪೆವಿಲಿಯನ್ ಸೇರಿಯಾಗಿತ್ತು. ಇನ್ನೊಂದು ಕಡೆ ರನ್ ಗಳಿಸಬೇಕಾದ ಒತ್ತಡವಿತ್ತು. ಹೀಗಿರುವಾಗ ಚೊಚ್ಚಲ ಪಂದ್ಯವಾಡಲು ಮೈದಾನಕ್ಕಿಳಿದ ಹನುಮ ವಿಹಾರಿ ಕೆಚ್ಚೆದೆಯಿಂದ ಆಡಿ ಅರ್ಧಶತಕ ಗಳಿಸಿಯೇ ಬಿಟ್ಟರು.
ಮತ್ತೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾದ ಎಲ್ಲಾ ಬೌಲರ್ ಗಳೂ ಜೋ ರೂಟ್ ಮತ್ತು ಅಲೆಸ್ಟರ್ ಕುಕ್ ಜೋಡಿಯನ್ನು ಬೇರ್ಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿ ಸೋತು ಹೋಗಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್ ಗೆ ಇಳಿದು ಇಬ್ಬರನ್ನೂ ಬೆನ್ನು ಬೆನ್ನಿಗೆ ಪೆವಿಲಿಯನ್ ಗೆ ಕಳುಹಿಸಿದರು. ಈಗಲೂ ಅದೇ ‘ಹನುಮ’ ಟೀಂ ಇಂಡಿಯಾವನ್ನು ಕಾಪಾಡಿದ.
ಆದರೆ ಚೊಚ್ಚಲ ಪಂದ್ಯವಾಡಿದ ಈ ಹುಡುಗನಿಗೆ ಅಂತಹದ್ದೊಂದು ಧೈರ್ಯ ಬರಲು ಕಾರಣ ರಾಹುಲ್ ದ್ರಾವಿಡ್ ಅಂತೆ! ಹಾಗಂತ ಮಾಧ್ಯಮಗಳ ಎದುರು ತಮ್ಮ ಗುರು, ಅಂಡರ್ 19 ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಹನುಮ ವಿಹಾರಿ.
ಜೇಮ್ಸ್ ಆಂಡರ್ಸನ್, ಬ್ರಾಡ್ ರ ಬೌಲಿಂಗ್ ಎದುರಿಸುವ ಬಗ್ಗೆ ನಾನು ತುಂಬಾ ಭಯಗೊಂಡಿದ್ದೆ. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಸರ್ ಗೆ ಕರೆ ಮಾಡಿದೆ. ಅವರ ಜತೆ ಫೋನ್ ನಲ್ಲಿ ಕೆಲವು ನಿಮಿಷಗಳವರೆಗೆ ಫೋನ್ ನಲ್ಲಿ ಮಾತನಾಡಿದಾಗ ನನಗೆ ಧೈರ್ಯ ಬಂತು. ನಿನಗೆ ಆ ಶಕ್ತಿ, ತಾಳ್ಮೆ ಇದೆ ಎಂದು ಅವರು ನನ್ನಲ್ಲಿ ಧೈರ್ಯ ತುಂಬಿದ್ದರು. ಆ ಧೈರ್ಯದಿಂದಲೇ ನನಗೆ ಅರ್ಧಶತಕ ಗಳಿಸಲು ಸಾಧ್ಯವಾಯಿತು ಎಂದು ಹನುಮ ವಿಹಾರಿ ಹೇಳಿದ್ದಾರೆ. ಅಂತೂ ದ್ರಾವಿಡ್ ಕಣ್ಣ ಮುಂದೆ ಬೆಳೆದ ಹುಡುಗ ಅವರಂತೆಯೇ ಆಡಿ ಪ್ರಥಮ ಇನಿಂಗ್ಸ್ ನಲ್ಲಿ ಭಾರತದ ಮಾನ ಕಾಪಾಡಿದ್ದ ಜತೆಗೆ ಗುರು ದ್ರಾವಿಡ್ ಹೆಸರು ಉಳಿಸಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.