Publish Date: Thu, 31 Oct 2019 (09:18 IST)
Updated Date: Thu, 31 Oct 2019 (09:20 IST)
ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ನವಂಬರ್ 3 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಿ20 ಪಂದ್ಯವಾಡಬೇಕಿದೆ. ಆದರೆ ಈ ಪಂದ್ಯ ನಡೆಸುವುದಕ್ಕೆ ಇದೀಗ ಹಲವೆಡೆಯಿಂದ ಅಪಸ್ವರ ಕೇಳಿಬಂದಿದೆ.
ಮೊದಲನೆಯದಾಗಿ ಇಲ್ಲಿ ಪಂದ್ಯ ನಡೆಸಲು ಕಳಪೆ ಮಟ್ಟದ ವಾತಾವರಣ ಕಾರಣ. ವಾಯು ಮಾಲಿನ್ಯದಿಂದಾಗಿ ಹೊಗೆಯುಕ್ತ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಇಲ್ಲಿ ಪಂದ್ಯ ಆಯೋಜಿಸುವುದು ಆಟಗಾರರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದು ಪರಿಸರವಾದಿಗಳು, ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ಅಭಿಪ್ರಾಯ.
ಇನ್ನೊಂದೆಡೆ ದೆಹಲಿಯಲ್ಲಿ ಉಗ್ರರ ದಾಳಿಯ ಭೀತಿಯಿದೆ. ಈ ಭೀತಿ ಪಂದ್ಯದ ಮೇಲೂ ಆವರಿಸಿದೆ. ಈಗಾಗಲೇ ಕ್ರಿಕೆಟಿಗರಿಗೆ ಹೆಚ್ಚಿನ ಭದ್ರತೆ ನೀಡಲು ದೆಹಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಷ್ಟೆಲ್ಲಾ ರಗಳೆಗಳ ನಡುವೆ ಇಲ್ಲಿ ಪಂದ್ಯ ಆಯೋಜಿಸುವುದರ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ಸ್ಥಳ ಬದಲಾವಣೆ ಕಷ್ಟವಾಗಿರುವುದರಿಂದ ಪಂದ್ಯ ಸ್ಥಳಾಂತರವಾಗುವುದು ಅನುಮಾನವಾಗಿದೆ.