Publish Date: Thu, 01 Mar 2018 (18:13 IST)
Updated Date: Thu, 01 Mar 2018 (18:15 IST)
ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಮೈದಾನದಲ್ಲಿನ ಆಕ್ರಮಣಕಾರಿ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ, ಇದರಿಂದಾಗಿ ಅವರು ಹಲವಾರು ಬಾರಿ ಟೀಕೆಗಳಿಗೂ ಗುರಿಯಾಗಿದ್ದಾರೆ.
ಈ ಮಧ್ಯೆ, ಕ್ರಿಕೆಟ್ ಆಡುತ್ತಿರುವಾಗ ವಿರಾಟ್ ತೋರುವ ಆಕ್ರಮಣಶೀಲತೆಯನ್ನು ಇಷ್ಟಪಡುವ ಅನೇಕ ಅಭಿಮಾನಿಗಳಿದ್ದಾರೆ. ಅವರಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ದಾದಾ ಎಂದೇ ಖ್ಯಾತರಾಗಿರುವ ಸೌರವ್ ಗಂಗೂಲಿ ಸಹ ಒಬ್ಬರು. ದಾದಾ, ವಿರಾಟ್ ತಮ್ಮ ಕೈ ಮುಷ್ಟಿಯನ್ನು ಯಾರಿಗೆ ತೋರಿಸುತ್ತಾರೆ ಎಂಬುದನ್ನು ಕೇಳಲು ಬಯಸುತ್ತಾರೆ.
ಗಂಗೂಲಿ ತಮ್ಮ ಮೊದಲ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದವರು ಅವರ ಉತ್ತರಾಧಿಕಾರಿಗಳ ಕುರಿತು ಅಭಿಪ್ರಾಯವನ್ನು ಕೇಳಿದಾಗ ಧೋನಿ ಹಾಗೂ ಕೊಹ್ಲಿಯನ್ನು ಹೊಗಳಿದರು. ಪ್ರಸ್ತುತ ಭಾರತೀಯ ಕ್ರಿಕೆಟ್ ನಾಯಕನಾಗಿರುವ ಕೊಹ್ಲಿಯ ಮೇಲೆ ಅವರು ಅಪಾರವಾದ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಮುಂಬರಲಿರುವ ಸಮಯ ಭಾರತ ತಂಡಕ್ಕೆ ತುಂಬಾ ಒಳ್ಳೆಯದು ಎಂದು ನಂಬಿದ್ದಾರೆ. ನಾಯಕನಾಗಿ ಸೌರವ್, ಧೋನಿ ಮತ್ತು ಕೊಹ್ಲಿಯ ಕಾರ್ಯವೈಖರಿಯ ನಡುವಿನ ವ್ಯತ್ಯಾಸದ ಕುರಿತು ಕೇಳಿದಾಗ, ಧೋನಿ ಮತ್ತು ಕೊಹ್ಲಿಯನ್ನು ಹೋಲಿಸಿದರೆ ಇಬ್ಬರೂ ವಿಭಿನ್ನ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು. ಕ್ರಿಕೆಟ್ ಮೈದಾನದಲ್ಲಿ ಕೊಹ್ಲಿ ಹೆಚ್ಚು ಆಕ್ರಮಣಕಾರಿ ಮನೋಭಾವದಿಂದ ಕೂಡಿರುತ್ತಾರೆ, ಅವರಿಗೆ ಹೋಲಿಸಿದರೆ ಧೋನಿ ತಂಪಾದ ಮತ್ತು ಶಾಂತ ಸ್ವಭಾವದಿಂದಿರುತ್ತಾರೆ ಎಂದು ಹೇಳಿದ್ದಾರೆ.
ಕೊಹ್ಲಿ ತಮ್ಮ ಆಕ್ರಮಣಶೀಲತೆಯನ್ನು ಹೆಚ್ಚಿನ ಮಟ್ಟದಲ್ಲಿ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಗಮನಿಸಿದ್ದಾಗಿ ಗಂಗೂಲಿ ಹೇಳಿದ್ದಾರೆ. ವಿರಾಟ್ ಸಾಮಾನ್ಯವಾಗಿ ಮೈದಾನದಲ್ಲಿ ತಮ್ಮ ಕೈ ಮುಷ್ಟಿಯನ್ನು ಯಾರಿಗೆ ತೋರಿಸುತ್ತಾರೆ ಎಂಬುದನ್ನು ನಾನು ಕೇಳಬೇಕೆಂದಿದ್ದೇನೆ ಎಂದು ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ತಮಾಷೆ ಮಾಡಿದ್ದಾರೆ. "ಬಹುಶಃ ಕೊಹ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಪ್ರತಿಬಾರಿ ವೀಕೆಟ್ ಬಿದ್ದಾಗಲೂ ಅವರು ತಮ್ಮ ಕೈ ಮುಷ್ಟಿಯನ್ನು ಯಾರಿಗೆ ತೋರಿಸುತ್ತಾರೆ ಎಂಬುದನ್ನು ನಾನು ಕೇಳಬೇಕೆಂದಿದ್ದೇನೆ. ಅವರಿಂದ ಅದನ್ನು ನಾನು ಕಂಡುಕೊಳ್ಳಬೇಕಿದೆ" ಎಂದು ಗಂಗೂಲಿ ತಮಾಷೆ ಮಾಡಿದರು. ಮುಂದುವರಿಸುತ್ತಾ, ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಕೊಹ್ಲಿ ಉತ್ತಮ ಆಟಗಾರ ಎಂದು ಕೊಹ್ಲಿಯನ್ನು ಪ್ರಶಂಸಿಸಿದ್ದಾರೆ.
ವಿರಾಟ್ ಭಾರತ ಕ್ರಿಕೆಟ್ ತಂಡವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಲಿದ್ದಾರೆ ಎಂದು ಗಂಗೂಲಿ ಭಾವಿಸುತ್ತಾರೆ. ಕೊಹ್ಲಿಯ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಈಗಾಗಲೇ ಸಾಕಷ್ಟು ಗೆಲುವಿನ ರುಚಿಯನ್ನು ನೋಡಿದೆ. "ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕರೆದೊಯ್ಯಲಿದ್ದಾರೆ ಎನ್ನುವುದರಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಕೆಲವು ಅಸಾಧಾರಣ ಪ್ರದರ್ಶನಗಳನ್ನು ನೀಡಿದ್ದು ಏಕದಿನ ಸರಣಿ ಹಾಗೂ ಟಿ20 ಸರಣಿಗಳನ್ನು ತನ್ನದಾಗಿಸಿಕೊಂಡಿದೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿಶ್ವದ ನಂ. 1 ಟೆಸ್ಟ್ ತಂಡವಾದ ಭಾರತವನ್ನು 2-1 ರಿಂದ ಮಣಿಸುವ ಮೂಲಕ ಸ್ವಲ್ಪ ಸಂತೋಷವನ್ನು ತನ್ನದಾಗಿಸಿಕೊಂಡಿದೆ.