Publish Date: Wed, 23 May 2018 (09:24 IST)
Updated Date: Wed, 23 May 2018 (09:25 IST)
ಮುಂಬೈ: ನಿನ್ನೆ ನಡೆದ ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಎರಡು ವರ್ಷಗಳ ಬಳಿಕ ಮತ್ತೆ ಸಿಎಸ್ ಕೆಗೆ ಮರಳಿದ ಧೋನಿಯ ಪ್ರಶಸ್ತಿ ಗೆಲ್ಲುವ ಕನಸಿನ ಹೊಸ್ತಿಲಿಗೆ ಬಂದಿದೆ.
ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ವರ್ಷ ನಿಷೇಧಕ್ಕೊಳಗಾಗಿದ್ದ ಸಿಎಸ್ ಕೆ ಈ ಆವೃತ್ತಿಗೆ ಮರಳಿ ಬಂದಾಗ ಧೋನಿ ಕೂಡಾ ತಂಡವನ್ನು ಕೂಡಿಕೊಂಡಿದ್ದಾರೆ. ನಾಯಕನಾಗಿ ಸಿಎಸ್ ಕೆಗೆ ಈಗಾಗಲೇ ಮೂರು ಬಾರಿ ಐಪಿಎಲ್ ಟ್ರೋಫಿ ಕೊಡಿಸಿರುವ ಧೋನಿಗೆ ಮತ್ತೊಮ್ಮೆ ಅದೇ ಕಮಾಲ್ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ.
ಈ ಬಾರಿ ಗೆಲುವಿನೊಂದಿಗೆ ಐಪಿಎಲ್ ಗೆ ಗುಡ್ ಬೈ ಹೇಳಲೂ ಧೋನಿ ಚಿಂತನೆ ನಡೆಸಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಬೌಲರ್ ಗಳದ್ದೇ ಮೆರೆದಾಟವಾಗಿತ್ತು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 139 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಳಿಕ ಬ್ಯಾಟಿಂಗ್ ಆರಂಭಿಸಿದ ಸಿಎಸ್ ಕೆಗೂ ಆರಂಭದಲ್ಲಿಯೇ ಆಘಾತ ಸಿಕ್ಕಿತ್ತು. ಶೇನ್ ವ್ಯಾಟ್ಸನ್ ಶೂನ್ಯಕ್ಕೇ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ಆದರೆ ನಂತರ ಫಾ ಡು ಪ್ಲೆಸಿಸ್ (67) ಮತ್ತು ಸುರೇಶ್ ರೈನಾ (22) ತಂಡಕ್ಕೆ ಚೇತರಿಕೆ ನೀಡಿದರು. ಇವರ ಬೆನ್ನಲ್ಲೇ ಸಿಎಸ್ ಕೆ ಪಟ ಪಟನೆ ವಿಕೆಟ್ ಉದುರಿಸಿಕೊಂಡಿತಾದರೂ, ಮೊತ್ತ ಸಣ್ಣದಾಗಿದ್ದರಿಂದ ಉಳಿದ ಬ್ಯಾಟ್ಸ್ ಮನ್ ಗಳು ಹಾಗೂ ಹೀಗೂ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಸಿಎಸ್ ಕೆ 8 ವಿಕೆಟ್ ನಷ್ಟಕ್ಕೆ 19.1 ಓವರ್ ಗಳಲ್ಲಿ 140 ರನ್ ಗಳಿಸಿ ಫೈನಲ್ ಗೆ ಲಗ್ಗೆಯಿಟ್ಟಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.