ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಕಾರಣ ಪೊಲೀಸರಲ್ಲ, ಈ ಎರಡು ವಿಚಾರಗಳು ಎಂಬುದು ಈಗ ಬಯಲಾಗುತ್ತಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನ ಸೇರಿದ್ದರು. ಒಮ್ಮಲೇ ಗೇಟ್ ತೆರೆದಾಗ ಏಕಾಏಕಿ ಜನ ನುಗ್ಗಲು ಹೊರಟಾಗ ದುರಂತ ಸಂಭವಿಸಿದೆ. ಈ ದುರಂತಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಅದೇನೆಂದು ನೋಡೋಣ.
ಉಚಿತ ಪ್ರವೇಶ
ಸಾಮಾನ್ಯವಾಗಿ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನೋಡಲು ಹೋಗಬೇಕೆಂದರೆ ಟಿಕೆಟ್ ದರ ದುಬಾರಿಯಿರುತ್ತದೆ. ಆದರೆ ಈಗ ಆಟಗಾರರ ಸಂಭ್ರಮಾಚರಣೆಗೆ ಉಚಿತವಾಗಿ ಪ್ರವೇಶ ನೀಡಲಾಗುವುದು ಎಂದು ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲೇ ಪ್ರಕಟವಾಗಿತ್ತು. ಯಾವಾಗ ಉಚಿತ ಪ್ರವೇಶ ಎಂದು ಗೊತ್ತಾಯಿತೋ ಲಕ್ಷಾಂತರ ಜನ ಮೈದಾನಕ್ಕೆ ಲಗ್ಗೆಯಿಟ್ಟಿದ್ದರು. ಇದೇ ಕಾರಣಕ್ಕೆ 35 ಸಾವಿರ ಜನರ ಸಾಮರ್ಥ್ಯದ ಮೈದಾನಕ್ಕೆ ಲಕ್ಷಾಂತರ ಜನ ಬಂದಿದ್ದರು. ಇದೇ ಪ್ರಮುಖ ಕಾರಣ.
ಎರಡು ಕಡೆ ಸೆಲೆಬ್ರೇಷನ್
ಆಟಗಾರರಿಗೆ ವಿಧಾನಸೌಧ ಮೆಟ್ಟಿಲ ಮೇಲೆಯೇ ಸನ್ಮಾನಿಸಲು ಸರ್ಕಾರ ಹಠ ಹಿಡಿದು ಕೂತಿದ್ದು. ಎರಡು ಕಡೆ ಸೆಲೆಬ್ರೇಷನ್ ಮಾಡಿದ್ದರಿಂದಲೇ ಜನ ಗೊಂದಲಕ್ಕೆ ಬಿದ್ದರು. ಎರಡು ಕಡೆ ಆಯೋಜನೆಯಾಗಿದೆ ಎಂದಿದ್ದಕ್ಕೆ ಜನರೂ ಜಾಸ್ತಿಯಾಗಿದ್ರು. ಇದೇ ಕಾರಣಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಈ ಎರಡು ಕಾರಣಗಳಿಂದಲೇ ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಸಂಭವಿಸಿದೆ.