Publish Date: Wed, 14 Feb 2024 (11:28 IST)
Updated Date: Wed, 14 Feb 2024 (11:30 IST)
ಮುಂಬೈ: ಇತ್ತೀಚೆಗೆ ಗಾಯಕ ಆದಿತ್ಯ ನಾರಾಯಣ್ ಲೈವ್ ಕಾರ್ಯಕ್ರಮದ ವೇಳೆಗೆ ಅಭಿಮಾನಿ ಕೈಗೆ ಹೊಡೆದು ಮೊಬೈಲ್ ಕಸಿದುಕೊಂಡು ಎಸೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಈ ಘಟನೆಯಲ್ಲಿ ಆದಿತ್ಯ ನಡೆದುಕೊಂಡ ರೀತಿಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆ ವ್ಯಕ್ತಿಗೆ ಮೊಬೈಲ್ ಖರೀದಿಸಲು ಎಷ್ಟು ಖರ್ಚಾಗಿರಬಹುದು, ಅದನ್ನು ಒಂದೇ ನಿಮಿಷಕ್ಕೆ ಆದಿತ್ಯ ಹಾಳು ಮಾಡಿದರು. ಆದಿತ್ಯಗೆ ಅಹಂಕಾರ. ತಂದೆ ಉದಿತ್ ನಾರಾಯಣ್ ರಂತೇ ವಿನಯವಂತಿಕೆ ಈತನಲ್ಲಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಘಟನೆ ಬಗ್ಗೆ ಅವರ ಮ್ಯಾನೇಜರ್ ನಿಜ ಕಾರಣವನ್ನು ಬಯಲು ಮಾಡಿದ್ದಾರೆ. ಆದಿತ್ಯ ಆ ರೀತಿ ನಡೆದುಕೊಳ್ಳಲು ನಿಜವಾದ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಆ ಅಭಿಮಾನಿ ಕಿರಿ ಕಿರಿ ಮಾಡುತ್ತಿದ್ದ ಕಾರಣಕ್ಕೇ ಆದಿತ್ಯ ಆ ರೀತಿ ನಡೆದುಕೊಂಡರು ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಲೇಜೊಂದರಲ್ಲಿ ಕಾರ್ಯಕ್ರಮ ನಡೆದಿತ್ತು. ಈ ವೇಳೆ ನೂರಾರು ವಿದ್ಯಾರ್ಥಿಗಳ ಜೊತೆಗೆ ಯಾರೋ ಹೊರಗಿನ ವ್ಯಕ್ತಿಯಿದ್ದ. ಆತ ಆದಿತ್ಯಗೆ ಪದೇ ಪದೇ ಕಿರಿ ಕಿರಿ ಮಾಡುತ್ತಿದ್ದ. ಆದಿತ್ಯ ಸ್ಟೇಜ್ ಅಂಚಿಗೆ ಬಂದಾಗಲೆಲ್ಲಾ ಕಾಲು ಎಳೆಯುವುದು, ಕಾಲಿಗೆ ಹೊಡೆಯುವುದು ಇತ್ಯಾದಿ ಮಾಡುತ್ತಿದ್ದ. ಆರಂಭದಲ್ಲಿ ಆದಿತ್ಯ ಸುಮ್ಮನಿದ್ದರು. ಆದರೆ ಆತನ ವರ್ತನೆ ಮಿತಿ ಮೀರಿದಾಗ ಆದಿತ್ಯ ಆ ರೀತಿ ವರ್ತಿಸಿದ್ದಾರೆ.
ಆತ ಕಾಲೇಜಿನ ವಿದ್ಯಾರ್ಥಿಯೇ ಆಗಿದ್ದರೆ ಪ್ರಾಂಶುಪಾಲರ ಮುಂದೆ ಬಂದು ದೂರು ನೀಡುತ್ತಿದ್ದ. ಆದರೆ ಆತ ಆ ಬಳಿಕ ಘಟನೆ ಬಗ್ಗೆ ಎಲ್ಲೂ ದೂರಿಲ್ಲ. ಹೀಗಾಗಿ ಆತ ಬೇರೆಯವನೇ ಇರಬೇಕು. ಇದೇ ಕಾರಣಕ್ಕೆ ಹಲವರು ಇತ್ತೀಚೆಗೆ ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಷ್ಟಪಡುತ್ತಿಲ್ಲ. ನೀವು ಘಟನೆಯ ಒಂದು ಸೈಡ್ ಮಾತ್ರ ನೋಡಿದ್ದೀರಿ. ಆದರೆ ಅಸಲಿ ವಿಚಾರ ಬೇರೆಯೇ ಇದೆ ಎಂದು ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.