Publish Date: Thu, 27 Aug 2020 (08:14 IST)
Updated Date: Thu, 27 Aug 2020 (08:18 IST)
ಕೇರಳ: ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಮುಖ ಪ್ರವಾಸಿ ತಾಣ. ನೈಸರ್ಗಿಕ ಶುಭ್ರ ಪರಿಸರವನ್ನು ಉಳಿಸಿಕೊಂಡಿರುವ ಕೇರಳದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಇದೂ ಒಂದು. ಇಂದಿಗೂ ಈ ಜಿಲ್ಲೆಯಲ್ಲಿ ನಾಗರಿಕತೆಯನ್ನೇ ಕಾಣದ ಹಲವು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವ ಇತಿಹಾಸದ ಕಾಲಘಟ್ಟದ ಕೆತ್ತನೆಗಳು ದೊರೆತಿವೆ.
ಚಾರಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ. ಎಡಕಲ್ಲು ಗುಡ್ಡ ಅಥವಾ ಗುಹೆಯಲ್ಲಿ 1000 ಮೀಟರ್ ಎತ್ತರದ ಗುಡ್ಡದ ಮೇಲೆ ಮೂರು ಗುಹೆಗಳು ಒಟ್ಟಾಗಿವೆ. ಇಲ್ಲಿ ಅನೇಕ ಕೆತ್ತನೆಗಳೂ ಇವೆ. ಇಲ್ಲಿಗೆ ಹೋಗಲು ಒಂದು ಕಿಮಿ ನಷ್ಟು ಎತ್ತರದ ಗುಡ್ಡ ಹತ್ತಬೇಕು.
ಚೆಂಬ್ರ ಶಿಖರವೂ ಚಾರಣಕ್ಕೆ ಹೆಚ್ಚು ಸೂಕ್ತವಾದುದು. ಸುಲ್ತಾನ್ ಬತ್ತೇರಿಯಲ್ಲಿ ಟಿಪ್ಪುವಿನ ಕೋಟೆ ಇದೆ. ಇಲ್ಲೊಂದು ಹಳೆಯ ಜೈನ ದೇವಾಲಯವಿದ್ದು ಇಲ್ಲಿ ಟಿಪ್ಪು ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ ಎನ್ನಲಾಗಿದೆ.
ಮೀನುಮುಟ್ಟಿ ಜಲಪಾತ ಇಲ್ಲಿನ ಇನ್ನೊಂದು ಪ್ರೇಕ್ಷಣೀಯ ತಾಣ. ಇದು ವಯನಾಡ್ ಜಿಲ್ಲೆಯ ಅತಿ ದೊಡ್ಡ ಜಲಪಾತವಾಗಿದ್ದು 300 ಮೀಟರ್ ಎತ್ತರದಿಂದ ಮೂರು ಹಂತಗಳಲ್ಲಿ ಬೀಳುತ್ತದೆ.
ಬಾಣಾಸುರಸಾಗರದಲ್ಲಿರುವ ಅಣೆಕಟ್ಟನ್ನು ಭಾರತದಲ್ಲಿಯೇ ಅತಿದೊಡ್ಡ ಮಣ್ಣಿನ ಅಣೆಕಟ್ಟೆಂದು ಪರಿಗಣಿಸಲಾಗಿದೆ. ಪೂಕೋಟೆ ಅಥವಾ ಪೂಕೊಡೆ ಸರೋವರವು ಪ್ರಾಕೃತಿಕ ಸಿಹಿನೀರಿನ ಸರೋವರವಾಗಿದ್ದು ವನಭೋಜನಕ್ಕೆ (ಪಿಕ್ನಿಕ್) ಗೆ ಹೇಳಿ ಮಾಡಿಸಿದ ತಾಣ.