Publish Date: Thu, 16 Sep 2021 (14:26 IST)
Updated Date: Thu, 16 Sep 2021 (13:29 IST)
ಸಣ್ಣ ಮತ್ತು ಮಧ್ಯಮ ಗಾತ್ರದ ಹೊಲಗಳನ್ನು ಹೊಂದಿರುವ ರೈತರಿಗೆ ಡಿಜಿಟಲ್ ಇಂಡಿಯಾ ಮೂಲಕ ಅವರ ಖಾತೆಗೆ ನೇರವಾಗಿ ಸಹಾಯಧನ ಜಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ' ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (ಪಿಎಂ ಕಿಸಾನ್). ಸುಮಾರು 12 ಕೋಟಿ ರೈತರು ವರ್ಷಕ್ಕೆ ಆರು ಸಾವಿರ ರೂ. ಹಣಕಾಸು ನೆರವನ್ನು ಪಡೆಯುತ್ತಿದ್ದಾರೆ.
ರೈತರ ಬ್ಯಾಂಕ್ ಖಾತೆಗೆ ಮೂರು ಕಂತುಗಳಲ್ಲಿ ನೇರವಾಗಿ ಹಣ ಬಂದು ಬೀಳುತ್ತಿದೆ. ಏಪ್ರಿಲ್ -ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್ -ಮಾರ್ಚ್ ಅವಧಿಗಳಲ್ಲಿ ಕಂತು ಜಮೆಯಾಗುತ್ತಿದೆ.
ಆಧಾರ್ ಜೋಡಣೆ ಮಾಡಿರುವ ಎಲೆಕ್ಟ್ರಾನಿಕ್ ಡಾಟಾಬೇಸ್ ಆಧರಿಸಿ ರೈತ ಸಮುದಾಯಕ್ಕೆ ಸರಕಾರ ನೆರವು ನೀಡುತ್ತಿದೆ. ರೈತರ ಕುಟುಂಬಸ್ಥರ ವಿವರ, ಭೂಮಿಯ ದಾಖಲೆಗಳು ಕೂಡ ಈ ಡಾಟಾಬೇಸ್ನಲ್ಲಿವೆ.
ಒಂದು ವೇಳೆ ನೀವು ಸಣ್ಣ ಪ್ರಮಾಣದ ಭೂಮಿ ಇರುವ ರೈತರಾಗಿದ್ದು, ಪಿಎಂ ಕಿಸಾನ್ ನಿಧಿ ಪಡೆಯಲು ಆಗುತ್ತಿಲ್ಲವಾದಲ್ಲಿ ಕೆಳಗಿನ ಸಲಹೆ ಅನುಸರಿಸಿ, ಅರ್ಜಿ ಸಲ್ಲಿಕೆ ಮಾಡಬಹುದು. ಇಲ್ಲವೇ ಅರ್ಜಿ ಸಲ್ಲಿಸಿಯೂ ಸಹಾಯಧನ ಸಿಕ್ಕಿಲ್ಲ ಎಂದಾದಲ್ಲಿ ಕೂಡ ಈ ಕೆಳಗಿನ ಸಲಹೆಗಳಂತೆ ನಿಮ್ಮ ಅರ್ಜಿ ಸಲ್ಲಿಕೆ ಕ್ರಮ ಸರಿಪಡಿಸಿಕೊಳ್ಳಬಹುದು.
1. www.pmkisan.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿರಿ.
2. ಮುಖಪುಟದಲ್ಲಿರುವ ರೈತರ ವಿಭಾಗ ಅಥವಾ ಫಾರ್ಮರ್ಸ್ ಕಾರ್ನರ್ಗೆ ಹೋಗಿರಿ.
3. ಇಲ್ಲಿನ ಫಲಾನುಭವಿ ಪಟ್ಟಿಯನ್ನು ಕ್ಲಿಕ್ ಮಾಡಿರಿ.
4. ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲಾ ಕೇಂದ್ರ, ಬ್ಲಾಕ್, ಹೋಬಳಿ, ಗ್ರಾಮವನ್ನು ಸರಿಯಾಗಿ ಆಯ್ಕೆ ಮಾಡಿರಿ.
5. ವರದಿ ಪಡೆಯುವುದು ಅಥವಾ 'ಗೆಟ್ ರಿಪೋರ್ಟ್' ಆಯ್ಕೆ ಮಾಡಿರಿ.
6. ಪರದೆ ಮೇಲೆ ಕಾಣುವ ಫಲಾನುಭವಿಗಳ ಪಟ್ಟಿಯನ್ನು ಗಮನಿಸಿರಿ, ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿರಿ.
7. ಮತ್ತೆ ವೆಬ್ಸೈಟ್ನ ಮುಖಪುಟಕ್ಕೆ ಹಿಂದಿರುಗಿರಿ. ಫಲಾನುಭವಿ ಸ್ಥಿತಿಗತಿ/ಬೆನಿಫಿಶಿಯರಿ ಸ್ಟೇಟಸ್ ಬಟನ್ ಆಯ್ಕೆ ಮಾಡಿರಿ.
8. ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಅಥವಾ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿರಿ.
9. ಈಗ ದಿನಾಂಕ/ಡೇಟ್ ಬಟನ್ ಒತ್ತಿರಿ.
10. ನಿಮ್ಮ ಧನಸಹಾಯದ ಕಂತಿನ ವಿವರವು ಪರದೆ ಮೇಲೆ ಬಿತ್ತರಗೊಳ್ಳಬೇಕು.
ಯಾರಿಗೆ ಈ ಯೋಜನೆ ಅನ್ವಯಿಸಲ್ಲ ?
ಸಾಂವಿಧಾನಿಕ ಹುದ್ದೆಗಳಲ್ಲಿದ್ದವರು, ಇರುವವರು, ಮಾಜಿ ಹಾಗೂ ಹಾಲಿ ಪ್ರಧಾನಿ, ಸಚಿವರು, ಎಂಎಲ್ಸಿ, ಎಂಎಲ್ಎ, ಮೇಯರ್ಗಳು, ಜಿಲ್ಲಾಪಂಚಾಯಿತಿ ಅಧ್ಯಕ್ಷರುಗಳು.
ಅದೇ ರೀತಿ ಕೇಂದ್ರ. ರಾಜ್ಯ ಸರಕಾರಿ ನೌಕರರು (ಹಾಲಿ ಮತ್ತು ನಿವೃತ್ತ) ಗ್ರೂಪ್ ಡಿ ನೌಕರರು, ಸ್ವಾಯತ್ತ ಸಂಸ್ಥೆಗಳ ನೌಕರರು, ಮಾಸಿಕ ಪಿಂಚಣಿ 10 ಸಾವಿರ ರೂ. ಗಿಂತ ಹೆಚ್ಚಿಗೆ ಪಡೆಯುತ್ತಿರುವ ಹಿರಿಯ ನಾಗರಿಕರು, ಪ್ರತಿ ವರ್ಷ ಆದಾಯ ತೆರಿಗೆ ಪಾವತಿ ಮಾಡುವವರು, ವೈದ್ಯರು, ಎಂಜಿನಿಯರ್ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್ಗಳು ಹಾಗೂ ಇತರ ವೃತ್ತಿಪರರು. 1961ರ ಆದಾಯ ತೆರಿಗೆ ಕಾಯಿದೆ ಅನ್ವಯ ಎನ್ಆರ್ಐ ಆಗಿರುವ ರೈತನ ಕುಟುಂಬ.