ವಿಶೇಷತೆ:
ಈ ಪುಣ್ಯ ಕ್ಷೇತ್ರವು ವಿದ್ಯಾದಶಮಿ ದಿನ ನಡೆಯುವ ಅಕ್ಷರಾಭ್ಯಾಸಕ್ಕೆ ಹೆಸರುವಾಸಿ. ದೇಶದೆಲ್ಲೆಡೆಯಿಂದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳಿಗೆ ಭಕ್ತಿಯ ತಾಣವಿದು. ತಮಿಳುನಾಡು ಮಾಜಿ ಮುಖ್ಯಮಂತ್ರಿ/ನಟ ಎಂಜಿಆರ್ ಅವರು ಈ ಕ್ಷೇತ್ರಕ್ಕೆ ಚಿನ್ನದ ಖಡ್ಗ ಒಪ್ಪಿಸಿದ್ದರೆ, ಸಂಗೀತ ನಿರ್ದೇಶಕ ಇಳಯರಾಜ ಅವರು ಕೋಟಿ ರೂ. ಮೌಲ್ಯದ ವಜ್ರ ಖಚಿತ ಹಸ್ತ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಒಂದು ಆನೆಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರಲ್ಲದೆ ಚೆನ್ನೈನಿಂದ ಕೊಲ್ಲೂರಿಗೆ ಬಸ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ. ಉದ್ಯಮಿ ವಿಜಯ ಮಲ್ಯ ಅವರು ಧ್ವಜಸ್ಥಂಬಕ್ಕೆ ಚಿನ್ನದ ಹೊದಿಕೆ ಮಾಡಿಸಿದ್ದಾರೆ. ನಾಲ್ಕು ಕೋಟಿ ರೂ. ಅಂದಾಜು ವೆಚ್ಚದ ಸ್ವರ್ಣ ರಥ ಇಲ್ಲಿ ಗಮನ ಸೆಳೆಯುತ್ತದೆ. ಖ್ಯಾತ ಗಾಯಕ ಜೇಸುದಾಸ್ ಇಲ್ಲಿಯ ಪರಮ ಭಕ್ತರು. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಇವರೆಲ್ಲರೂ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.
ಗರ್ಭಗುಡಿಯಲ್ಲಿನ ಪಾಣಿಪೀಠ ಸ್ವರ್ಣರೇಖೆ ಇರುವ ಜ್ಯೋತಿರ್ಲಿಂಗದಿಂದ ಒಡಗೂಡಿದೆ. ಅಲ್ಲಿ ಪ್ರಕೃತಿ, ಶಕ್ತಿ, ಕಾಳಿ, ಲಕ್ಷ್ಮಿ, ಸರಸ್ವತಿ ನೆಲೆಯಾಗಿದ್ದಾರೆ ಎಂಬ ನಂಬಿಕೆ ಇದೆ. ಪುರಾಣದಲ್ಲಿ ವರ್ಣಿಸಿದಂತೆ ಶ್ರೀಚಕ್ರದಲ್ಲಿ ಆದಿಶಕ್ತಿ ಮತ್ತು ಸಮಸ್ತ ದೇವತೆಗಳು ನೆಲೆಸಿರುವಂತೆ ಜ್ಯೋರ್ತಿಲಿಂಗದಲ್ಲಿ ಆದಿಶಕ್ತಿ ಮತ್ತು ಬ್ರಹ್ಮ, ವಿಷ್ಣು, ಮಹೇಶ್ವರ ದೇವತೆಗಳು ನೆಲೆಸಿದ್ದಾರೆ. ಮೊದಲೇ ಇದ್ದ ಈ ಸಾನಿಧ್ಯವನ್ನು ಕೋಲ ಮಹರ್ಷಿಯು ಗುರುತಿಸಿದನೆಂದು ಪುರಾಣದಲ್ಲಿ ಹೇಳಿದೆ.
ಜ್ಯೋತಿರ್ಲಿಂಗದ ಪಶ್ಚಿಮ ಭಾಗದಲ್ಲಿ ಶ್ರೀದೇವಿಯ ಪಂಚಲೋಹದ ಸುಂದರ ಮೂರ್ತಿ ಇದೆ. ಶಂಖ, ಚಕ್ರ, ಅಭಯ ವರದ ಹಸ್ತಳಾದ, ಸರ್ವಾಲಂಕಾರಭೂಷಿತಳಾದ ಮೂಕಾಂಬಿಕೆ ಪದ್ಮಾಸನದಲ್ಲಿ ವಿರಾಜಮಾನಳಾಗಿದ್ದಾಳೆ. ಒಳಸುತ್ತಿನ ದಕ್ಷಿಣ ಭಾಗದಲ್ಲಿ ಅಂಬಿಕೆಯ ಮಗ ದಶಭುಜ ಗಣಪತಿಯ ಚಿಕ್ಕ ಗುಡಿಯಿದೆ. ಪಶ್ಚಿಮದಲ್ಲಿ ಆದಿ ಶಂಕರಾಚಾರ್ಯರು ತಪಸ್ಸು ಮಾಡಿದ ಪೀಠ, ಅದರ ಮುಂಭಾಗದಲ್ಲಿ ಆದಿ ಶಂಕರರ ಅಮೃತ ತತ್ವ ಸಾರುವ ಅಮೃತ ಶಿಲೆಯ ಮೂರ್ತಿ ಇದೆ. ಶಂಕರಾಚಾರ್ಯ ಪೀಠ ದರ್ಶನ ಮಾಡಲು ದೇವಸ್ಥಾನದ ಕಚೇರಿಯಿಂದ ಅನುಮತಿ ಪತ್ರ ಪಡೆಯಬೇಕು.
ಒಳಸುತ್ತಿನ ಉತ್ತರ ದ್ವಾರದಿಂದ ಹೊರ ಬಂದರೆ ಈಶಾನ್ಯದ ಯಾಗ ಶಾಲೆಯ ಸಮೀಪ ವೀರಭದ್ರೇಶ್ವರ, ಮೂಕಾಸುರನ ವಧೆ ಮಾಡುವಾಗ ಆದಿ ದೇವಿಯ ಜೊತೆಯಲ್ಲಿ ಬಂದವನೆಂದು ಪ್ರತೀತಿ. ವೀರಭದ್ರನಿಗೆ ವಿಭೂತಿ ಅರ್ಚನೆ, ವಿಭೂತಿ ಪ್ರಸಾದಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಅದೇ ರೀತಿ ದಕ್ಷಿಣಕ್ಕೆ ತಿರುಗಿದರೆ ಗರ್ಭಗುಡಿಯ ನೇರ ಪೂರ್ವಕ್ಕೆ ಬಲಿಪೀಠ, ಧ್ವಜಸ್ತಂಭ ಮತ್ತು ದೀಪಸ್ತಂಭಗಳು. ದೀಪಸ್ತಂಭಕ್ಕೀಗ ಚಿನ್ನದ ಹೊದಿಕೆ ಹಾಕಲಾಗಿದೆ. ಕಾರ್ತಿಕ ಮಾಸದ ದೀಪೋತ್ಸವದಂದು ದೀಪ ಹಚ್ಚುತ್ತಾರೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ. ಉತ್ತರದ ಬಾಗಿಲಿನಿಂದ ಹೊರಬಂದರೆ ಶ್ರೀ ದೇವಿ ಪ್ರಸಾದ ನಿಲಯ, ಭೋಜನ ಶಾಲೆ ಇದೆ. ಪ್ರತಿದಿನ ಸಾವಿರಾರು ಭಕ್ತರಿಗೆ, ನೂರಾರು ಶಾಲಾ ಮಕ್ಕಳಿಗೆ ಅನ್ನದಾನ ನಡೆಯುತ್ತದೆ. ಅದರ ಸಮೀಪದಲ್ಲೇ ಯಾತ್ರಿಗಳ ವಸತಿಗೃಹವಿದೆ.
ದೇವಸ್ಥಾನದ ಪಶ್ಚಿಮ ಬೀದಿಯಲ್ಲಿ ತ್ರ್ಯಂಬಕೇಶ್ವರ, ಶೃಂಗೇರಿ ಮಠದ ಈಶ್ವರ ಗುಡಿ, ಮಾರಿಯಮ್ಮನ ಗುಡಿಗಳಿವೆ. ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ಅಧ್ಯಯನ, ಸಾಧನೆಗಳಿಗೆ ಸಂಬಂಧಿಸಿದ ಆಧ್ಯಾತ್ಮಿಕ ಕೇಂದ್ರಗಳಿವೆ. ಕಂಚಿ ಕಾಮಕೋಟಿ ಪೀಠದಿಂದ ನಡೆಯುವ ಶ್ರೀಜಯೇಂದ್ರ ಸರಸ್ವತೀ ವೇದಪಾಠ ಶಾಲೆಯಲ್ಲಿ ವಟುಗಳಿಗೆ ಉಚಿತವಾಗಿ ವೇದಾಧ್ಯಯನ ಮಾಡಲು ವಸತಿ ಶಿಕ್ಷಣ ಸೌಲಭ್ಯವಿದೆ.
ಐತಿಹ್ಯ:
ಕೋಲ ಮಹರ್ಷಿಯು ತಪಸ್ಸು ಮಾಡಿ ಮಹಾಲಕ್ಷ್ಮಿಯನ್ನು ಒಲಿಸಿಕೊಂಡ ಈ ಸಿದ್ಧ ಕ್ಷೇತ್ರವೇ ಕೋಲಾ(ಕೊಲ್ಲೂರು)ಪುರ ಎನಿಸಿಕೊಂಡಿದೆ. ಅದೇ ಸಮಯದಲ್ಲಿ ಕಂಹಾಸುರನೆಂಬ ರಾಕ್ಷಸ ಭೈರವಿ ದೇವಿಯನ್ನು ಪೂಜಿಸಿ ಹರಿಹರಾದಿಗಳಿಂದ ಮರಣ ಹೊಂದದ ವರ ಪಡೆದು ತುಂಬಾ ಅಹಂಕಾರಿಯಾಗಿ ಮೆರೆಯುತ್ತಿದ್ದ.
ಅಹಂಕಾರದಿಂದ ಬೀಗಿದ ಕಂಹಾಸುರ ಋಷಿ, ಮುನಿಗಳಿಗೆ ಉಪದ್ರವಕಾರಿಯಾದಾಗ ಕೋಲ ಮಹರ್ಷಿಯು ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿಸಿದನು, ಆಗ ಶ್ರೀದೇವಿಯು ಪ್ರತ್ಯಕ್ಷಳಾಗಿ ಕಂಹಾಸುರನ ಸಂಹಾರಕ್ಕೆ ಸಿದ್ಧಳಾದಳು. ಆಗ ಕಂಹಾಸುರನು ಬೆದರಿ ಋಷ್ಯಮೂಕ ಪರ್ವತವನ್ನು ಸೇರಿ, ಅಲ್ಲಿ ಘೋರ ತಪಸ್ಸಿಗೆ ಆರಂಭಿಸಿದನು.
ದೇವತೆಗಳಿಂದಾಗಿ ತಾನು ಮೂಕನಾದುದನ್ನು ತಿಳಿದು ಮೂಕಾಸುರನು ದೇವತೆಗಳಿಗೆ ಅತಿಯಾದ ಉಪಟಳ ನೀಡತೊಡಗಿದ. ಆಗ ದೇವತೆಗಳು ಕೋಲ ಮಹರ್ಷಿಯ ಮೂಲಕ ಕೋಲಾಪುರೇಶಿಯ ಮೊರೆ ಹೋದರು. ದೇವತೆಗಳ ದೈನ್ಯ ಸ್ಥಿತಿ ಕಂಡು ಕೋಲಾಪುರೇಶಿಯಾದ ಶ್ರೀಮಹಾಲಕ್ಷ್ಮಿಯು ವೀರಭದ್ರ, ಗಣಪತಿಯರೊಡನೆ ಶಿವ ಸಮೇತಳಾಗಿ ಕೋಲಾಪುರಕ್ಕೆ ಬಂದಳು. ಜ್ಯೇಷ್ಠ ಶುಕ್ಲ ಅಷ್ಟಮಿಯಂದು ತನ್ನ ಚಕ್ರದಿಂದ ಮೂಕಾಸುರನ ಶಿರಸ್ಸನ್ನು ಕತ್ತರಿಸಿದ್ದಳು, ಆ ಬಳಿಕ ದೇವಿ ಮೂಕಾಂಬಿಕೆ ಎಂಬ ಹೆಸರನ್ನು ಪಡೆದು ತೇಜೋಮಯ ಶ್ರೀ ಚಕ್ರಬಿಂಬ ರೂಪವಾಗಿ ಅಖಂಡ ಸಚ್ಚಿದಾನಂದ ಪರಬ್ರಹ್ಮ ಸ್ವರೂಪ ಲಿಂಗವನ್ನು ಸೇರಿದಳು. ಅಂದಿನಿಂದ ಜಗತ್ತಿನ ಮಂಗಳಕ್ಕಾಗಿ ಮಂಗಳ ಸ್ವರೂಪದಲ್ಲಿ ಶಿವನು ರಚಿಸಿದ ಶ್ರೀಚಕ್ರದ ಬಿಂದು ಸ್ವರೂಪವಾಗಿ ಕೊಲ್ಲೂರಿನಲ್ಲಿ ನೆಲೆಯಾಗಿ ಕೊಲ್ಲೂರು ಮೂಕಾಂಬಿಕೆ ಎಂದೇ ಜಗದ್ವಿಖ್ಯಾತಿ ಗಳಿಸಿದಳು.
ಉತ್ಸವ:
ಕೊಲ್ಲೂರು ದೇವಳದಲ್ಲಿ ಪಂಚ ಪೂಜೆ, ತ್ರಿಕಾಲ ಬಲಿ, ಉತ್ಸವಗಳು ನಡೆದುಕೊಂಡು ಬರುತ್ತಿದೆ. ಉತ್ಸವಗಳಲ್ಲಿ ಮುಖ್ಯವಾಗಿ ನಿತ್ಯೋತ್ಸವ, ವಾರೋತ್ಸವ,ಮಾಸೋತ್ಸವ, ಷಣ್ಮಾಸೋತ್ಸವ ಮತ್ತು ವಾರ್ಷಿಕ ಉತ್ಸವಗಳನ್ನು ಆಚರಿಸಲಾಗುತ್ತದೆ.
ಇದಲ್ಲದೆ ಚಾಂದ್ರಮಾನ ಯುಗಾದಿ, ಶ್ರೀರಾಮ ನವಮಿ, ನವರಾತ್ರಿ,ಸೌರಯುಗಾದಿ, ಶ್ರೀಮೂಕಾಂಬಿಕಾ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಶ್ರೀಕೃಷ್ಣಾಷ್ಟಮಿ, ನರಕ ಚತುರ್ದಶಿ ಸೇರಿದಂತೆ ಪ್ರಮುಖ ಉತ್ಸವ ಇಲ್ಲಿ ನಡೆಯುತ್ತದೆ.
ಮಾರ್ಗ:
ಉಡುಪಿಯಿಂದ 70 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ರೈಲಿನಲ್ಲಿ ಬಂದಲ್ಲಿ ಕುಂದಾಪುರ ಸ್ಟೇಶನ್ನಲ್ಲಿ ಇಳಿದರೆ 40 ಕಿ.ಮೀ. ದೂರ. ಕುಂದಾಪುರದಿಂದ ನೇರ ತಲ್ಲೂರು ಮಾರ್ಗವಾಗಿ ಬಸ್ಸಿನಲ್ಲಿ ಪ್ರಯಾಣಿಸಬಹುದು. ಬಸ್ನಲ್ಲಿ ಹೊರಟರೆ 36 ಕಿ.ಮೀ.ದೂರವಿದೆ. ಕೊಲ್ಲೂರು ಬಸ್ ನಿಲ್ದಾಣದಿಂದ ದೇವಳಕ್ಕೆ ರಿಕ್ಷಾದಲ್ಲೂ ಹೋಗಬಹುದು, ಕಾಲ್ನಡಿಗೆಯಲ್ಲಿ ಹೋದರೆ ಪರಿಸರ ಸೌಂದರ್ಯವನ್ನು ಸವಿಯಬಹುದು. ತುಂಬಾ ಲಗೇಜ್ ಇಲ್ಲದಿದ್ದರೆ, ಸುಮಾರು ಅರ್ಧ ಕಿ.ಮೀ.ದೂರದ ಸೌಪರ್ಣಿಕಾ ನದಿಯ ಸ್ನಾನ ಘಟ್ಟಕ್ಕೆ ಹೋಗಿ ತೀರ್ಥಸ್ನಾನ ಮಾಡಿ ಬರಬಹುದು.
ಚಿತ್ರಗಳು ಮತ್ತು ವೀಡಿಯೋ: ಸಂತೋಷ್ ಕುಂದೇಶ್ವರ |
|
|
|
|
|
|
|
|