Newsworld News National 1009 14 1100914083_1.htm

Select Your Language

Notifications

webdunia
webdunia
webdunia
webdunia

ಹಗಲು ಕಲ್ಲು ಹೊಡೆಯಿರಿ, ರಾತ್ರಿ ಕೆಲಸ ಮಾಡಿ: ಗಿಲಾನಿ

ಹುರಿಯತ್ ಕಾನ್ಫರೆನ್ಸ್
ಹೀಗೆಂದು ಕರೆ ನೀಡಿರುವುದು ಪ್ರತ್ಯೇಕತಾವಾದಿ 'ಹುರಿಯತ್ ಕಾನ್ಫರೆನ್ಸ್' ನಾಯಕ ಸಯ್ಯದ್ ಆಲಿ ಶಾ ಗಿಲಾನಿ. 11 ದಿನಗಳ ಪ್ರತಿಭಟನಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ಆತ, ಹಗಲು ಪ್ರತಿಭಟನೆ ನಡೆಸಿ, ರಾತ್ರಿ ಕೆಲಸ ಮಾಡಿ ಎಂದು ಕಾಶ್ಮೀರ ಜನತೆಗೆ ಹೇಳಿದ್ದಾನೆ.

ಈ ವೇಳಾಪಟ್ಟಿಯಿಂದ ಸೆಪ್ಟೆಂಬರ್ 19 ಮತ್ತು 22ನ್ನು ಮಾತ್ರ ಹೊರತುಪಡಿಸಲಾಗಿದ್ದು, ಗಿಲಾನಿ ನೇತೃತ್ವದ ಹುರಿಯತ್ ಕಣಿವೆ ರಾಜ್ಯದ ಕಾನೂನು ಸುವ್ಯವಸ್ಥೆಗೆ ಮತ್ತಷ್ಟು ಧಕ್ಕೆ ತರಲಿದೆ ಎಂದು ಹೇಳಲಾಗುತ್ತಿದೆ.

ಗಿಲಾನಿ ಘೋಷಿಸಿರುವ 11 ದಿನಗಳಲ್ಲಿ ರಾತ್ರಿ ಏಳರಿಂದ ಬೆಳಿಗ್ಗೆ ಏಳರ ತನಕ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಉಳಿದ ಹೊತ್ತಿನಲ್ಲಿ ಜನತೆ ಪ್ರತಿಭಟನೆ ಮತ್ತು ಮುಷ್ಕರಗಳಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಲಾಗಿದೆ.

ಉತ್ಪಾದನಾ ಘಟಕಗಳು, ಹಿಟ್ಟಿನ ಗಿರಣಿ ಮತ್ತು ಸಿಮೆಂಟ್ ಕಾರ್ಖಾನೆಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಘಟಕಗಳು ಸಂಜೆ ಏಳರಿಂದ ಬೆಳಿಗ್ಗೆ ಏಳರ ತನಕ ಮಾತ್ರ ಕಾರ್ಯ ನಿರ್ವಹಿಸುತ್ತವೆ ಎಂದು ಹುರಿಯತ್ ಹೊರಡಿಸಿರುವ ಹೇಳಿಕೆ ತಿಳಿಸಿದೆ.

ಅಂಗಡಿ ಮಳಿಗೆಗಳು ಮತ್ತು ಇತರೆ ವ್ಯಾಪಾರಿ ಸಂಸ್ಥೆಗಳು ಕೂಡ ರಾತ್ರಿ ಹೊತ್ತು ಕಾರ್ಯ ನಿರ್ವಹಿಸಬಹುದಾಗಿದೆ. ಸರಕು ಸಾಗಣೆದಾರರು ರಾತ್ರಿ ತಮ್ಮ ಕರ್ತವ್ಯ ನಿಭಾಯಿಸಬಹುದು. ಆದರೆ ಹಗಲು ಹೊತ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಶ್ಮೀರಿಗಳಿಗೆ ಬೋಧಿಸಿದೆ.

ಸೆಪ್ಟೆಂಬರ್ 21ರಂದು ಭದ್ರತಾ ಪಡೆಗಳ ಶಿಬಿರಗಳತ್ತ ಶಾಂತ ರೀತಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಬೇಕು ಎಂದು ಗಿಲಾನಿ ಕರೆ ನೀಡಿದ್ದಾನೆ.

ಜೂನ್ 11ರಂದು ಭದ್ರತಾ ಪಡೆಗಳ ಗುಂಡಿಗೆ ಯುವಕನೊಬ್ಬ ಬಲಿಯಾದ ನಂತರ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಇದುವರೆಗೆ 88 ಮಂದಿ ಬಲಿಯಾಗಿದ್ದಾರೆ. ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳಿಂದ ಸಹಕಾರ ಪಡೆದುಕೊಳ್ಳುತ್ತಿವೆ ಎಂದು ಹೇಳಲಾಗಿರುವ ಪ್ರತ್ಯೇಕತಾವಾದಿ ಸಂಘಟನೆಗಳು, ಇಲ್ಲಿನ ಜನತೆಗೆ ವೇತನ ಕೊಟ್ಟು ಪ್ರತಿಭಟನೆಗೆ ನಿಯೋಜಿಸುತ್ತವೆ.

ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಯೆಂದರೆ ಅದರ ಮತ್ತೊಂದು ಅರ್ಥ ಕಲ್ಲು ತೂರಾಟ, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚುವುದು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು. ಈ ರೀತಿಯಲ್ಲಿ ಹಿಂಸಾಪೂರಿತ ಪ್ರತಿಭಟನೆ ನಡೆಸುವಾಗ ಪೊಲೀಸರು ಮತ್ತು ಭದ್ರತಾ ಪಡೆಗಳು ಅನಿವಾರ್ಯವಾಗಿ ಗುಂಪು ಚದುರಿಸಲು ಗುಂಡು ಹಾರಿಸುತ್ತಾ ಬಂದಿರುವುದು ಸಾಮಾನ್ಯ.

Share this Story:

Follow Webdunia kannada