Publish Date: Mon, 29 Mar 2010 (10:27 IST)
Updated Date: Mon, 29 Mar 2010 (10:26 IST)
ಮಹಾರಾಷ್ಟ್ರ ಮುಖ್ಯಮಂತ್ರಿ ಚವಾಣ್ ಸ್ವತಃ ಮೇರು ನಟ ಅಮಿತಾಭ್ ಬಚ್ಚನ್ ಅವರನ್ನು ಸೀ ಲಿಂಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿ, ನಂತರ ಅಲ್ಲಗಳೆದು ವಿವಾದ ಸ್ಫೋಟಗೊಂಡ ಬೆನ್ನಲ್ಲೇ, ಅರ್ಥ್ ಅವರ್ಗೆ ರಾಯಭಾರಿಯಾಗಿದ್ದ ಅಭಿಷೇಕ್ ಬಚ್ಚನ್ಗೆ ವಿರೋಧ ವ್ಯಕ್ತವಾಗಿದ್ದು, ಅಭಿಷೇಕ್ ಭಿತ್ತಿಚಿತ್ರಗಳನ್ನು ಹರಿದು ಹಾಕಲಾಗಿದೆ.
ವರ್ಲ್ಡ್ ವೈಲ್ಡ್ಲೈಫ್ ಫೌಂಡೇಶನ್ ನೇತೃತ್ವದಲ್ಲಿ ನಡೆದ ಅರ್ಥ್ ಅವರ್ಗೆ ಅಭಿಷೇಕ್ ರಾಯಭಾರಿ. ಅಮಿತಾಭ್ ಗುಜರಾತ್ ಪ್ರವಾಸೋದ್ಯಮ ರಾಯಭಾರಿ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ನಡುವಿನ ತಿಕ್ಕಾಟದಲ್ಲಿ ಬಚ್ಚನ್ ಕುಟುಂಬ ಸಿಲುಕಿಕೊಂಡಿದೆ.
ಶನಿವಾರ ರಾತ್ರಿ ದೆಹಲಿಯಲ್ಲಿ ಸಂಘಟಿಸಿದ್ದ ಅರ್ಥ್ ಅವರ್ ಆಚರಣೆ ಸಂದರ್ಭದಲ್ಲಿ ಪುತ್ರ ಅಭಿಷೇಕ್ ಅವರ ಭಿತ್ತಿಚಿತ್ರಗಳನ್ನು ಕಿತ್ತುಹಾಕಿರುವ ಬಗ್ಗೆ ಅಮಿತಾಭ್ ತಮ್ಮ ಬ್ಲಾಗ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಭಾಗವಹಿಸಿದ್ದರು. ಈ ಕೃತ್ಯಗಳು ಒಂದೇ ರೀತಿಯಾಗಿ ಕಾಣುತ್ತಿವೆ. ಇದು ನನ್ನ ಭ್ರಮೆಯೇ?ಎಂದು ಬಚ್ಚನ್ ಬ್ಲಾಗ್ನಲ್ಲಿ ಪ್ರಶ್ನಿಸಿಕೊಂಡಿದ್ದಾರೆ.
ಸೀ ಲಿಂಕ್ ಉದ್ಘಾಟನಾ ಸಮಾರಂಭದ ವಿವಾದದಲ್ಲಿ ಬಚ್ಚನ್ ಅವರನ್ನು ಅನಾವಶ್ಯಕವಾಗಿ ಸಿಲುಕಿಸಲಾಗಿದೆ ಎಂದು ಕಿಡಿಕಾರಿದ್ದ ಶಿವಸೇನಾ ವರಿಷ್ಠ ಬಾಳಠಾಕ್ರೆ, ಅಮಿತಾಭ್ ಬಚ್ಚನ್ ಉಗ್ರರೇ, ಕಳ್ಳನೇ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡುವ ಮೂಲಕ ತಮ್ಮ ಹಳೇ ಗೆಳೆಯನಿಗೆ ಸಾಥ್ ನೀಡಿದ್ದರು.