Publish Date: Mon, 05 Jan 2009 (12:51 IST)
Updated Date: Mon, 05 Jan 2009 (12:51 IST)
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ್ನಲ್ಲಿ ಭಾರಿ ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಭಾರತದಲ್ಲಿ ಶೀತಗಾಳಿ ಬೀಸುತ್ತಿದ್ದು, ಅಸಾಧ್ಯಚಳಿಯಿಂದಾಗಿ ಭಾನುವಾರ 15 ಮಂದಿ ಸಾವನ್ನಪ್ಪಿದ್ದು ಇದುವರೆಗೆ ಸುಮಾರು 46 ಮಂದಿ ಚಳಿಗೆ ಆಹುತಿಯಾದಂತಾಗಿದೆ.
ಇದಲ್ಲದೆ, ಎಲ್ಲೆಡೆ ದಟ್ಟ ಮಂಜು ಕವಿದಿದ್ದು, ರಸ್ತೆ, ರೈಲು ಮತ್ತು ವಾಯು ಸಾರಿಗೆಗೆ ಅಡ್ಡಿಯುಂಟಾಗಿದ್ದು ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಶಾಲಾಕಾಲೇಜುಗಳಿಗೆ ರಜೆ ಸಾರಲಾಗಿದೆ.
ದಟ್ಟವಾಗಿ ಕವಿದಿರುವ ಮಂಜಿನಿಂದಾಗಿ ಕಾನ್ಪುರದಲ್ಲಿ ಗೂಡ್ಸ್ ರೈಲುಗಳ ಡಿಕ್ಕಿಯಾಗಿದ್ದು, ಚಾಲಕರುಗಳಲ್ಲೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಿಂದಾಗಿ ದೆಹಲಿ-ಹೌರಾ ಹಳಿಯ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಕಾಶ್ಮೀರ ಕಣಿವೆಯ ಎತ್ತರ ಪ್ರದೇಶಗಳ ಬಲ್ರಾಲ್ ಮತ್ತು ದ್ರಾಸ್, ಲೇಹ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದೂವರೆ ಅಡಿ ಹಿಮಗಡ್ಡೆಕಟ್ಟಿತ್ತು. ಶ್ರೀನಗರದಲ್ಲಿ 0.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಮಾತಾ ವೈಶ್ಣೋದೇವಿ ಮಂದಿರದ ಬಳಿಯ ಜಮ್ಮುವಿನ ತ್ರಿಕೂಟ ಹಿಲ್ಸ್ನಲ್ಲಿ ಈ ವರ್ಷದ ಪ್ರಥಮ ಹಿಮಪಾತವಾಗಿದೆ. ಅದೇನೇ ಇದ್ದರೂ ಈ ಮಂದಿರದ ಯಾತ್ರೆಗೆ ಯಾವುದೇ ಅಡ್ಡಿಯಾಗಿಲ್ಲ.