Publish Date: Tue, 25 Nov 2008 (10:38 IST)
Updated Date: Tue, 25 Nov 2008 (10:37 IST)
ತಮಗೆ ಎಟಿಎಸ್ ಚಿತ್ರಹಿಂಸೆ ನೀಡುತ್ತಿದೆ, ನಗ್ನವಾಗಿಸುವ ಮತ್ತು ಕೊಲೆ ಮಾಡುವ ಬೆದರಿಕೆಯೊಡ್ಡಿದೆ ಎಂದು ಮಾಲೆಗಾಂವ್ ಸ್ಫೋಟ ಅರೋಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಅಜಯ್ ರಾಹಿರ್ಕಾರ್ ಅವರು ಆರೋಪಿಸಿದ ಹಿನ್ನೆಲೆಯಲ್ಲಿ, ಅವರನ್ನು ತಮ್ಮ ವಶಕ್ಕೊಪ್ಪಿಸುವ ಕುರಿತ ಎಟಿಎಸ್ ಮನವಿಯನ್ನು ಮೋಕಾ ನ್ಯಾಯಾಲಯ ತಿರಸ್ಕರಿಸಿದ್ದು, ಎಟಿಎಸ್ಗೆ ಹಿನ್ನಡೆಯಾಗಿದೆ.
ಎಟಿಎಸ್ ತಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದೆ ಎಂಬ ಆರೋಪಗಳ ಜೊತೆಗೆ ತಮಗೆ ಅಶ್ಲೀಲ ಸಿಡಿಗಳನ್ನೂ ತೋರಿಸಲಾಯಿತು ಎಂದೂ ಸಾಧ್ವಿ ಪ್ರಜ್ಞಾ ಠಾಕೂರ್ ಅರೋಪ ಮಾಡಿದ್ದಾರೆ.
ಆರೋಪಿಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಎಟಿಎಸ್ ಮನವಿ ಸಲ್ಲಿಸಿತ್ತು. ಆದರೆ ವಿಶೇಷ ಎಂಸಿಒಸಿಎ (ಮೋಕಾ) ನ್ಯಾಯಾಧೀಶ ವೈ.ಡಿ. ಶಿಂಧೆ ಎಟಿಎಸ್ ಮನವಿಯನ್ನು ತಿರಸ್ಕರಿಸಿ, ಈ ಮೂವರನ್ನು ಮತ್ತು ಇತರ ನಾಲ್ವರು ಅರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸುವ ತೀರ್ಪು ನೀಡಿದರು.
ಮೋಕಾ ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಲಾದ ಎಲ್ಲಾ ಏಳು ಮಂದಿ ಆರೋಪಿಗಳು ತಮಗೆ ಎಟಿಎಸ್ ಕಸ್ಟಡಿಯಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಅರೋಪಿಸಿದ್ದರು.
"ಎಟಿಎಸ್ ಆಧಿಕಾರಿಗಳು ಸ್ಫೋಟದಲ್ಲಿ ನನ್ನ ಪಾತ್ರವನ್ನು ಒಪ್ಪಿಕೊಳ್ಳದಿದ್ದಲ್ಲಿ ನನ್ನನ್ನು ಬೆತ್ತಲೆಗೊಳಿಸುವುದಾಗಿ ಮತ್ತು ತಲೆಕೆಳಗೆ ಮಾಡಿ ನೇತು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ. ನಾನು ಮಾನಸಿಕವಾಗಿ ವಿಚಲಿತಳಾಗಿದ್ದೇನೆ ಮತ್ತು ಆಹಾರ ಸೇವಿಸುವುದು ಸಹ ಸಾಧ್ಯವಾಗುತ್ತಿಲ್ಲ" ಎಂದು ಸಾಧ್ವಿ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.
ತಮ್ಮನ್ನು ಒಂದು ರಾಡ್ನಿಂದ ತಲೆಕೆಳಗೆ ಮಾಡಿ ನೇತು ಹಾಕಲಾಗಿತ್ತು ಮತ್ತು ಕೈಗಳನ್ನು ಕಂಬಗಳಿಗೆ ಕಟ್ಟಿ ಹಾಕಲಾಗಿತ್ತು. ಇದರಿಂದ ತಾವು ಮಣಿಗಂಟಿನಿಂದ ಹಿಡಿದು ಬೆರಳುಗಳವರೆಗೆ ಸ್ಪರ್ಶ ಶಕ್ತಿಯನ್ನೇ ಕಳೆದುಕೊಂಡಿದ್ದಾಗಿ ಪುರೋಹಿತ್ ಎಟಿಎಸ್ ಮೇಲೆ ಆರೋಪ ಹೊರಿಸಿದ್ದಾರೆ.
"ನನ್ನನ್ನು ತನಿಖೆ ಮಾಡುವ ವೇಳೆ ಎಟಿಎಸ್ ನನ್ನ ಮನೆಯಲ್ಲಿ ಅರ್ಡಿಎಕ್ಸ್ ಇಡುವುದಾಗಿ ಮತ್ತು ನನ್ನನ್ನು ಎನ್ಕೌಂಟರ್ನಲ್ಲಿ ಕೊಲ್ಲುವುದು ತಮಗೆ ಬಹುಸುಲಭವೆಂದು ಹೇಳಿದ್ದಾರೆ" ಎಂದು ಪುರೋಹಿತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.