Publish Date: Wed, 30 Apr 2008 (17:11 IST)
Updated Date: Wed, 30 Apr 2008 (17:11 IST)
ನುಂಗಣ್ಣಗಳ ಬಗ್ಗೆ ಕೇಳಿದ್ದೀರಿ. ಅಂವ ನನ್ನ ಹಣ ನುಂಗಿದ, ಈ ಸರಕಾರಿ ಅಧಿಕಾರಿ ಸಖತ್ ನುಂಗ್ತಾನೆ ಅಂತೆಲ್ಲಾ ಹೇಳಿದ್ದನ್ನು ಕೇಳಿದ್ದೀರಿ. ವಸ್ತುಶಃ ಹಣ ನುಂಗಿದ ಪೊಲೀಸ್ ಅಧಿಕಾರಿಯೊಬ್ಬನ ಸುದ್ದಿಯಿದು.
ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಪೊಲೀಸನೊಬ್ಬ, ತನ್ನ ಪಾಪಕೃತ್ಯದ ಸಾಕ್ಷಿ ನಾಶ ಮಾಡಬೇಕೆಂಬ ಉದ್ದೇಶದಿಂದ ಏನು ಮಾಡಬೇಕೂಂತ ತಿಳಿಯದೆ 500 ರೂಪಾಯಿಗಳ ಏಳೆಂಟು ನೋಟುಗಳನ್ನೇ ನುಂಗಿಬಿಟ್ಟ ಘಟನೆ ನಡೆದದ್ದು ಹೈದರಾಬಾದಿನಲ್ಲಿ.
ಹೈದರಾಬಾದ್ ಸಮೀಪದ ಮೇದಿಪಟ್ಟಣಂ ಪ್ರದೇಶದ ಹುಮಾಯೂನ್ ನಗರ ಪೊಲೀಸ್ ಠಾಣೆಯಲ್ಲಿ ಇದು ನಡೆದಿದೆ. ಭ್ರಷ್ಟಾಚಾರ ನಿರೋಧಕ ದಳವು (ಎಸಿಬಿ) ಆ ಠಾಣೆಯ ಎಸ್ಐ ಚಂದ್ರಕಿರಣ್ ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದು ಬಿಟ್ಟಿತ್ತು. ಅವರಿಂದ ತಪ್ಪಿಸಿಕೊಳ್ಳಲೆಂದು ಎಸ್ಐ ಒಂದು ಬಸ್ಸನ್ನೇರಿದ್ದ. ಆದರೆ ಎಸಿಬಿ ಸಿಬ್ಬಂದಿ ಬಿಡಬೇಕಲ್ಲ. ಬಸ್ಸನ್ನು ಹಿಂಬಾಲಿಸಿ, ಆತನನ್ನು ಹಿಡಿದೇಬಿಟ್ಟರು. ಆದರೆ ಅಷ್ಟರಲ್ಲಿ ಚಂದ್ರಕಿರಣ್ ಅದಾಗಲೇ 500 ರೂಪಾಯಿಯ ಎಂಟು ನೋಟುಗಳನ್ನು ಗುಳುಂ ಮಾಡಿದ್ದ.
ಪ್ರಕರಣವೊಂದರ ತನಿಖೆಗೆ ಸಂಬಂಧಿಸಿ ದೂರುದಾರರಿಂದ ಚಂದ್ರಕಿರಣ್ ನಾಲ್ಕು ಸಾವಿರ ರೂ. ಲಂಚ ಪಡೆದಿದ್ದ ಎಂದು ಎಸಿಬಿ ಅಧಿಕಾರಿ ರಾಧಾಕೃಷ್ಣ ತಿಳಿಸಿದ್ದಾರೆ. ಇದೀಗ ಈ ಎಸ್ಐಯನ್ನು ಆಸ್ಪತ್ರೆಗೆ ಕರೆದೊಯ್ದು, ಕೆಲವೊಂದು ಗುಳಿಗೆಗಳನ್ನೂ ನುಂಗುವಂತೆ ಮಾಡಿ, ಆತ ನುಂಗಿದ್ದ ಹಣವನ್ನು ಅಲ್ಲಿ ಕಕ್ಕಿಸಲಾಗಿದೆ.