Publish Date: Fri, 11 Jan 2008 (19:14 IST)
Updated Date: Fri, 11 Jan 2008 (19:07 IST)
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಆಗ್ರಹಿಸಿದ ನಂತರ, ಇದೀಗ ಜ್ಯೋತಿ ಬಸುಗೆ ಭಾರತದ ಪರಮೋನ್ನತ ಪ್ರಶಸ್ತಿ ನೀಡಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.
"ಅರ್ಥಹೀನ ವಿವಾದಗಳ ಚರ್ಚೆ ನಿಲ್ಲಿಸಿ" ಎಂದು ಪ್ರಧಾನಿ ಶುಕ್ರವಾರ ಕರೆ ನೀಡಿದ ಬೆನ್ನಿಗೇ, ಸಿಪಿಐಎಂ ಈ ಆಗ್ರಹ ಮುಂದಿಟ್ಟಿದೆ. ಬಸುಗೆ ಭಾರತ ರತ್ನ ನೀಡಬೇಕೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯ ಬಿಮನ್ ಬೋಸ್, "ಬಸು ಈ ಪದವಿಗೆ ಬೇಕಾದ ಅರ್ಹತೆಗಳನ್ನು ಪೂರೈಸುತ್ತಾರೋ ಎಂಬುದು ನನಗೆ ತಿಳಿಯದು. ಅವರು ಅದಕ್ಕೆ ಅರ್ಹರಾದಲ್ಲಿ, ಅವರಿಗೆ ಅತ್ಯಂತ ಶ್ರೇಷ್ಠ ಪೌರ ಪ್ರಶಸ್ತಿಯನ್ನು ನೀಡಬಹುದು" ಎಂದು ಉತ್ತರಿಸಿದರು.
ಆದರೆ, ವಾಜಪೇಯಿ ಹೆಸರು ಸೂಚಿಸಿ ಆಡ್ವಾಣಿಯವರು ಪ್ರಧಾನಿಗೆ ಪತ್ರ ಬರೆದಿರುವುದನ್ನು ಖಂಡಿಸಿದ ಬೋಸ್, ಬಿಜೆಪಿಯು ರಾಷ್ಟ್ರದ ಅತ್ಯುನ್ನತ ಪೌರ ಪ್ರಶಸ್ತಿಯೊಂದಿಗೆ ರಾಜಕೀಯದಾಟ ಆಡುತ್ತಿದೆ ಎಂದು ಟೀಕಿಸಿದರು.
ಭಾರತ ರತ್ನವನ್ನು ಯಾವ ಮಾನದಂಡಗಳ ಆಧಾರದಲ್ಲಿ ನೀಡಲಾಗುತ್ತದೆ ಅಥವಾ ವಾಜಪೇಯಿ ವ್ಯಕ್ತಿತ್ವವು ಈ ಮಾನದಂಡಗಳನ್ನೆಲಾ ಪೂರೈಸುತ್ತದೋ ಎಂಬುದು ನನಗೆ ತಿಳಿದಿಲ್ಲ. ಆದರೆ ಬಿಜೆಪಿಯವರು ಈ ಬಗ್ಗೆ ರಾಜಕೀಯ ಮಾಡುತ್ತಾರೆ ಎಂಬುದಂತೂ ಖಚಿತ ಎಂದು ಅವರು ಹೇಳಿದರು.