Publish Date: Mon, 21 Apr 2008 (18:52 IST)
Updated Date: Mon, 21 Apr 2008 (18:51 IST)
ಬಂಡಾಯದ ಬಿಸಿ ಜೆಡಿಎಸ್ ಪಕ್ಷವನ್ನೂ ಬಿಟ್ಟಿಲ್ಲ. ಮೊದಲ ಹಂತದ ಚುನಾವಣೆ ನಡೆಯುವ 89 ಕ್ಷೇತ್ರಗಳ ಪೈಕಿ 64 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರು ಆಖೈರುಗೊಳಿಸುತ್ತಿದ್ದಂತೆಯೇ ಭಿನ್ನಮತ ಸ್ಪೋಟಗೊಂಡಿದೆ.
ಬಿ ಫಾರಂ ನೀಡಿಕೆಯಾಗುತ್ತಿದ್ದಂತೆಯೇ ಟಿಕೆಟ್ ವಂಚಿತರು ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಮನೆಗೆ ಮುತ್ತಿಗೆ ಹಾಕಿ ಬೀಗ ಜಡಿದು ಸುಮಾರು 2 ಗಂಟೆಗಳವರೆಗೂ ಕೂಡಿಹಾಕಿದ ಘಟನೆಯೂ ನಡೆದಿದೆ. ಇದರೊಂದಿಗೆ ಕೆಲವು ಕಾರ್ಯಕರ್ತರು ವಿಷ ಕುಡಿದು ಆತ್ಮಹತ್ಯೆಗೂ ಪ್ರಯತ್ನಿಸಿದ್ದು ರಾಜಕಾರಣ ಸಾಗುತ್ತಿರುವ ದಿಕ್ಕಿಗೆ ಹಿಡಿದ ಕನ್ನಡಿಯಾಗಿದೆ.
ರಾಜರಾಜೇಶ್ವರಿ ನಗರದಿಂದ ಟಿಕೆಟ್ ಬಯಸಿದ್ದ ಎಂ.ವಿ.ವೆಂಕಟೇಶ ಮೂರ್ತಿ ಹಾಗೂ ಮಹಾಲಕ್ಷ್ಮಿಪುರದಿಂದ ಟಿಕೆಟ್ ಬಯಸಿದ್ದ ಟಿ.ವೀರೇಶ್ ಕುಮಾರ್ ಬೆಂಬಲಿಗರು ಜೆಡಿಎಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೇ ಅಲ್ಲದೇ, ಮೆರಾಜುದ್ದೀನ್ ಪಟೇಲ್ ಮನೆಗೂ ಲಗ್ಗೆಹಾಕಿದರು. ಈ ಸಂದರ್ಭದಲ್ಲಿ ಕೆಲವರು ಅವರ ಮನೆಯ ಮೇಲೆ ಕಲ್ಲು ಹೊಡೆದು ಕಿಟಕಿ ಗಾಜುಗಳನ್ನು ಪುಡಿಗಟ್ಟಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಒಂದು ವೇಳೆ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನಿರಾಕರಿಸುವ ವರಿಷ್ಠರ ಈ ಚಾಳಿ ಮುಂದುವರಿದದ್ದೇ ಆದಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ನಿಲ್ಲುವ ಇಲ್ಲವೇ ಬೇರೆ ಪಕ್ಷಗಳಿಂದ ಸ್ಪರ್ಧಿಸುವುದಾಗಿ ಕೆಲವರು ಹೇಳಿಕೆ ನೀಡಿದ್ದರೆ, ವರಿಷ್ಠರು ಪಟ್ಟಿ ಬದಲಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತೆ ಕೆಲವು ನಿಷ್ಠಾವಂತ ಕಾರ್ಯಕರ್ತರು ಬೆದರಿಕೆ ಹಾಕಿದರು ಎಂದು ತಿಳಿದುಬಂದಿದೆ.