Publish Date: Mon, 21 Apr 2008 (15:08 IST)
Updated Date: Mon, 21 Apr 2008 (15:07 IST)
ಕಡುಬಡವರಿಗೆ 2 ರೂ. ಗೆ ಕಿಲೋ ಅಕ್ಕಿ, ಹಾಲಿಗೆ ಬೆಂಬಲ ಬೆಲೆ, ಬಡವರ ಬಿಪಿಎಲ್ ಪಟ್ಟಿ, ಆದಾಯಮಿತಿ ಹೆಚ್ಚಳ, ಆಟೋ ಚಾಲಕರಿಗೆ, ಕಾಫಿ ತೋಟದ ಮತ್ತು ಅಸಂಘಟಿತ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್, ಬಡವರಿಗೆ ಮಂಗಳ ಸೂತ್ರ ಇದು ಬಿಜೆಪಿ ಚುನಾವಣಾ ಪ್ರಣಾಳಿಕೆಯ ಕೆಲವು ಸ್ಯಾಂಪಲ್ಗಳಷ್ಟೆ.
ಪಕ್ಷವು ವಿಧ್ಯುಕ್ತವಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಕ್ಕೆ ಮುಂಚಿತವಾಗಿಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ವಿವರಗಳನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.
ಬಿಪಿಎಲ್ ಪಟ್ಟಿಯ ಕಡುಬಡವರ ಆದಾಯ ಮಿತಿಯನ್ನು 11,800 ರೂ.ನಿಂದ 30 ಸಾವಿರ ರೂ.ವರೆಗೆ ಏರಿಸುವುದು; ಬಡವರ ಪಟ್ಟಿ ಪರಿಷ್ಕರಿಸಿ 60 ಸಾವಿರ ರೂ. ಆದಾಯ ಮಿತಿ ನಿಗದಿಪಡಿಸುವುದು ಇದರಲ್ಲಿ ಸೇರಿದೆ. ಇದರಿಂದ ಸರಕಾರದ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಯೋಜನೆ, ಮಕ್ಕಳ ಬೈಸಿಕಲ್, ವೃದ್ದಾಪ್ಯ ವೇತನ ಯೋಜನೆಗಳು ಬಡ ವರ್ಗದ ಹೆಚ್ಚು ಮಂದಿಗೆ ಲಭಿಸಲಿದೆ. ಆರೋಗ್ಯ ವಿಮೆ, ಅಪಘಾತ ಚಿಕಿತ್ಸೆಗೆ ಉಚಿತವಾಗಿ ಸರ್ಕಾರದಿಂದಲೇ ನೀಡುವ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಗುವಿಗೆ 1 ಲಕ್ಷ ರೂ. ನೀಡುವಿಕೆ ಇವೆಲ್ಲಾ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಲಿವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮಠ ಮಂದಿರಗಳಲ್ಲಿ ಸಾಮೂಹಿಕ ವಿವಾಹ ನಡೆದಾಗ 25 ಜೋಡಿ ಇದ್ದರೆ ಮಾತ್ರ ಸರ್ಕಾರದಿಂದ 10 ಸಾವಿರ ಲಭಿಸುತ್ತಿತ್ತು. ಈಗ 5 ಜೋಡಿ ಮದುವೆಯಾದರೂ ಈ ಸೌಲಭ್ಯ ವಿಸ್ತರಣೆಯಾಗಲಿದೆ. ಚಿನ್ನದ ದರ ಏರಿಕೆ ಕಾರಣ ಬಡವರಿಗೆ ಮಂಗಳ ಸೂತ್ರ ನೀಡುವ ಯೋಜನೆಯಿದೆ ಎಂದು ತಮ್ಮ ಪ್ರಣಾಳಿಕೆಯ ಬಗ್ಗೆ ಯಡಿಯೂರಪ್ಪ ವಿವರ ನೀಡಿದರು.