Publish Date: Mon, 21 Apr 2008 (18:15 IST)
Updated Date: Mon, 21 Apr 2008 (18:13 IST)
ಬಳ್ಳಾರಿ ಗಣಿ ಮಾಲೀಕರು ನಡೆಸುತ್ತಿರುವ ಚುನಾವಣಾ ಗಲಭೆಗೆ ಕಡಿವಾಣ ಹಾಕುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಇಲ್ಲಿನ ರಾಜರಾಜೇಶ್ವರಿ ದೇವಾಲಯದಲ್ಲಿ ತಮ್ಮ ಕುಟುಂಬ ವರ್ಗದೊಂದಿಗೆ ಹಮ್ಮಿಕೊಂಡಿದ್ದ ಚಂಡಿಕಾಯಾಗದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಗಣಿ ಮಾಲೀಕರ ಅಬ್ಬರದಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ ಎಂದರು. ಗಲಭೆಗೆ ಕಾರಣಕರ್ತರಾದ ಅಭ್ಯರ್ಥಿಗಳಿಗೆ ಮತ್ತು ಅಂತಹ ಅಭ್ಯರ್ಥಿಗಳನ್ನು ಬೆಂಬಲಿಸುವ ಪಕ್ಷಗಳಿಗೆ ಮತ ಹಾಕದಂತೆ ಸಾರ್ವಜನಿಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಇತ್ತೀಚೆಗೆ ಅನಿಲ್ ಲಾಡ್ಗೆ ಸೇರಿದ ಮೂರು ವಾಹನಗಳಿಗೆ ಬೆಂಕಿ ಹಾಕಿದ ಪ್ರಕರಣ ಗಣಿ ಮಾಲೀಕರ ಗೂಂಡಾ ಪ್ರವೃತ್ತಿಯನ್ನು ತೋರಿಸುತ್ತದೆ ಎಂದ ಅವರು ಈ ರೀತಿಯ ಗೂಂಡಾ ಪ್ರವೃತ್ತಿಯನ್ನು ನಿಯಂತ್ರಿಸಬೇಕಾದರೆ ಜನ ಇವರಿಗೆ ಮತ ಹಾಕದೇ ಸೋಲಿಸಬೇಕು ಎಂದರು.