Publish Date: Sat, 19 Apr 2008 (13:35 IST)
Updated Date: Sat, 19 Apr 2008 (13:21 IST)
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆಗೆ ಪ್ರಯತ್ನಿಸಿ ಕಾದು ಸುಸ್ತಾದ ಸಂಯುಕ್ತ ಜನತಾದಳ ಇದೀಗ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ. ಸೋಮಶೇಖರ್ ಮಳವಳ್ಳಿ ಮೀಸಲು ಕ್ಷೇತ್ರದಿಂದ, ಮಾಜಿ ಶಾಸಕ ಮಾದುಸ್ವಾಮಿ ಚಿಕ್ಕನಾಯಕನಹಳ್ಳಿಯಿಂದ, ಮಾಜಿ ಶಾಸಕ ಮೈಕೇಲ್ ಫರ್ನಾಂಡೀಸ್ ಸರ್ವಜ್ಞನಗರ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಮಲ್ಲಿಕಾರ್ಜುನ ಬೊಮ್ಮಾಯಿ ಹೆಬ್ಬಾಳ ಕ್ಷೇತ್ರದಿಂದ, ಮಾಜಿ ಸಚಿವ ಸಿ. ವೀರಣ್ಣ ಮಧುಗಿರಿಯಿಂದ ಹಾಗೂ ಸಂಸದ ವಿ. ವೆಂಕಟೇಶ್ ಕೆಜಿಎಫ್ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇದಕ್ಕೂ ಮೊದಲು ರಾಜ್ಯ ಬಿಜೆಪಿ ಜೊತೆ ಪೂರ್ವ ಹೊಂದಾಣಿಕೆ ನಡೆಸಲು ಮುಂದಾಗಿದ್ದ ಜೆಡಿಯು, ಕಳೆದ ಚುನಾವಣೆಯಂತೆ ಈ ಬಾರಿಯೂ 25 ಸ್ಥಾನಗಳನ್ನು ನೀಡುವಂತೆ ಬಿಜೆಪಿ ಮುಖಂಡರ ಜೊತೆ ನಡೆಸಿದ ಮಾತುಕತೆಯಲ್ಲಿ ತಿಳಿಸಿತ್ತು. ಆದರೆ ರಾಜ್ಯ ಬಿಜೆಪಿ ಇದಾವುದಕ್ಕೂ ಗಣನೆಗೆ ತೆಗೆದುಕೊಳ್ಳದೆ, ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ, ಜೆಡಿಯು ತರಾತುರಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈಗ ಒಟ್ಟು 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೈತ್ರಿಗೆ ಹಿಂದೇಟು ಹಾಕಿರುವ ಬಿಜೆಪಿ ವಿರುದ್ಧವೇ ಕಣಕ್ಕೆ ಇಳಿಯಲು ಮುಂದಾಗಿರುವ ಜೆಡಿಯು, 18 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧವೇ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದೆ.