Publish Date: Mon, 27 Dec 2021 (13:09 IST)
Updated Date: Mon, 27 Dec 2021 (15:11 IST)
ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲಾದರೂ ಮಾಡಲಿ. ಆದರೆ ಕೋವಿಡ್-19 ನಿಯಮ ಪಾಲಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಹೊಸ ವರ್ಷಕ್ಕೆ ಇನ್ನೇನು ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಈ ನಡುವೆ ಜನ ಹೊಸ ವರ್ಷಾಚರಣೆಗೆ ಗುಂಪುಗೂಡಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಘೋಷಿಸಿದೆ.
ಕೊರೊನಾ ಎರಡನೇ ಅಲೆಯಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ರಾಜ್ಯದ ಜನತೆಗೆ ಇದೀಗ ಮತ್ತೊಮ್ಮೆ ನೈಟ್ ಕರ್ಫ್ಯೂ ವಿಧಿಸಿರುವುದು ಭಾರೀ ಆತಂಕ ಸೃಷ್ಟಿಸಿದೆ. ಹಲವಾರು ಮಂದಿ ಈ ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಈ ಕುರಿತಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ನಮಗೂ ಆರ್ಥಿಕ ಚಟುವಟಿಕೆಗಳು ನಡೆಯಲಿ ಎಂಬ ಯೋಚನೆ ಇದೆ. ಕೋವಿಡ್ ಕಾರಣದಿಂದಾಗಿ ಆರೋಗ್ಯ ದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದೇವೆ ಎಂದು ಹೇಳಿದ್ದಾರೆ.