Publish Date: Wed, 20 Apr 2022 (10:24 IST)
Updated Date: Wed, 20 Apr 2022 (10:26 IST)
ನವದೆಹಲಿ : ದಿಲ್ಲಿ ಹಾಗೂ ಸುತ್ತಲಿನ ರಾಜಧಾನಿ ವಲಯದಲ್ಲಿ ಏಕಾಏಕಿ ಕೋವಿಡ್ ಸಂಖ್ಯೆ ಏರಿಕೆ ಆಗತೊಡಗಿದೆ.
ಇದು ದೇಶಕ್ಕೆ ಮುನ್ನೆಚ್ಚರಿಕೆಯಂತಿದೆ. ಸೋಂಕು ಏರಿಕೆಗೆ ಹೆಚ್ಚು ಸೋಂಕುಕಾರಕವಾಗಿರುವ ಇತ್ತೀಚಿನ ಕೋವಿಡ್ ತಳಿಯಾದ ಎಕ್ಸ್ಇ ಕಾರಣವೆ ಅಥವಾ ಇನ್ನಾವುದೋ ಹೊಸ ಕೋವಿಡ್ ತಳಿ ಕಾರಣವೇ ಎಂಬುದರ ಪತ್ತೆಗೆ ಸರ್ಕಾರ ಮುಂದಾಗಿದೆ.
ಈ ನಡುವೆ, ಬುಧವಾರ ದಿಲ್ಲಿ ವಿಕೋಪ ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಿದೆ. ಸಭೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಾಲ್ಗೊಳ್ಳಲಿದ್ದಾರೆ.
ಏತನ್ಮಧ್ಯೆ, ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿ, ಕೋವಿಡ್ ಇನ್ನು ಒಂದಿಲ್ಲೊಂದು ರೂಪದಲ್ಲಿ ಇದ್ದೇ ಇರುತ್ತದೆ ಎನ್ನಿಸುತ್ತಿದೆ. ಹೀಗಾಗಿ, ಸುರಕ್ಷಿತ ಕ್ರಮಗಳನ್ನು ಕೈಗೊಂಡು ಅದರ ಜತೆ ಜೀವನ ನಡೆಸುವುದನ್ನು ಕಲಿಯಬೇಕು. ಆದರೆ ಆತಂಕ ಪಡಬಾರದು ಎಂದಿದ್ದಾರೆ.