Publish Date: Mon, 18 Apr 2022 (07:57 IST)
Updated Date: Mon, 18 Apr 2022 (00:59 IST)
ನವದೆಹಲಿ : ಕೋವಿಡ್ ಸಮಯದಲ್ಲಿ 5 ಲಕ್ಷ ಅಲ್ಲ, ಸರ್ಕಾರದ ನಿರ್ಲಕ್ಷ್ಯದಿಂದಾಗಿ 40 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿಯ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸತ್ಯವನ್ನು ಮಾತನಾಡುವುದಿಲ್ಲ, ಇತರರಿಗೂ ಮಾತನಾಡಲು ಬಿಡುವುದಿಲ್ಲ.
ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್ಒ) ಶನಿವಾರ ಕೋವಿಡ್-19 ನಿಂದ ಮೃತಪಟ್ಟವರ ಸಂಖ್ಯೆಯನ್ನು ಅಂದಾಜಿಸಲು ಭಾರತಕ್ಕೆ ತಿಳಿಸಿತ್ತು. ಭಾರತದ ಭೌಗೋಳಿಕ ಗಾತ್ರ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸಾವಿನ ಅಂಕಿ ಅಂಶವನ್ನು ಅಂದಾಜು ಮಾಡಲು ಬಳಸಿರುವ ಗಣಿತದ ಮಾದರಿಯನ್ನು ಪರಿಶೀಲಿಸಲು ತಿಳಿಸಿತ್ತು.
ಡಬ್ಲ್ಯೂಹೆಚ್ಒ ಜಾಗತಿಕ ಕೋವಿಡ್ ಮರಣ ಸಂಖ್ಯೆಯ ವರದಿಯನ್ನು ತಿಳಿಸಲು ಭಾರತ ಅಡ್ಡಿಪಡಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ದಿ ನ್ಯೂಯಾರ್ಕ್ ಟೈಮ್ಸ್ ಶನಿವಾರ ಲೇಖನವನ್ನು ಬರೆದಿತ್ತು.
ಇದರ ಬೆನ್ನಲೇ ಡಬ್ಲ್ಯೂಹೆಚ್ಒ ಅಂಕಿ ಅಂಶವನ್ನು ಪರಿಶೀಲಿಸಲು ಭಾರತವನ್ನು ತಿಳಿಸಿದ್ದು, ಸರ್ಕಾರ ಕೋವಿಡ್-19ನ ನಿಜವಾದ ಸಾವಿನ ವರದಿಯನ್ನು ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಭಾನುವಾರದ ಅಂಕಿ ಅಂಶದ ಪ್ರಕಾರ, ಕಳೆದ ದಿನ ಕೋವಿಡ್ನಿಂದ 4 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,12,751 ಕ್ಕೆ ಏರಿದೆ.