Publish Date: Mon, 07 Aug 2023 (09:22 IST)
Updated Date: Mon, 07 Aug 2023 (10:57 IST)
ಬೆಂಗಳೂರು : ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆ ಮೊನ್ನೆಯಷ್ಟೇ ಅನುಷ್ಠಾನಗೊಂಡಿದ್ದು, ಬಹುತೇಕ ಫಲಾನುಭವಿಗಳು ಫ್ರೀ ಬಿಲ್ ನಿರೀಕ್ಷೆಯಲ್ಲಿದ್ದರು. ಆದ್ರೆ ಕೆಲವರಿಗೆ ಮಾತ್ರ ಬೆಸ್ಕಾಂ ಸಿಬ್ಬಂದಿ ಬಿಲ್ ಕೈಗಿಟ್ಟಿದ್ದು ಶಾಕ್ ಆಗಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಅಪ್ಲೈ ಮಾಡಿದಾಗಿನಿಂದ ಕೆಲವು ಫಲಾನುಭವಿಗಳು ಉಚಿತ ಕರೆಂಟ್ ಅಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದ್ದು, ಜುಲೈ ತಿಂಗಳ ಬಿಲ್ ಶೂನ್ಯ ಅಂದವರಿಗೆ 200 ಯೂನಿಟ್ ಹೆಚ್ಚುವರಿ ಬಿಲ್ ಬೆಸ್ಕಾಂ ಸಿಬ್ಬಂದಿ ಕೈಗಿಟ್ಟಿದ್ದಾರೆ.
ಸರ್ಕಾರದ 200 ಯೂನಿಟ್ ಗಿಂತ ಹೆಚ್ಚಾಗಿ ಯೂನಿಟ್ ಬಳಕೆ ಹಿನ್ನಲೆ ಬಿಲ್ ನೀಡಿದ್ದು, ಈಗ ಫಲಾನುಭವಿಗಳು ಮಾತ್ರ ನಾವು ಅಷ್ಟು ಬಳಸೇ ಇಲ್ಲ ಮೀಟರ್ ಸರಿ ಇಲ್ಲ ಎಂದು ಹೊಸ ವರಸೆ ಶುರುಮಾಡಿಕೊಂಡಿದ್ದಾರಂತೆ.
ಇನ್ನು ಯೋಜನೆಯ ನೋಂದಣಿಯನ್ನು ಜುಲೈ 1 ರಂದು ಪ್ರಾರಂಭಿಸಲಾಗಿದ್ದು, ಜುಲೈ 27 ರವರೆಗೆ ನೋಂದಾಯಿಸಿಕೊಂಡವರು ಜುಲೈ ತಿಂಗಳಲ್ಲಿ ಸರಾಸರಿ ಮಿತಿಯ ಒಳಗೆ ವಿದ್ಯುತ್ ಬಳಸಿದ್ದರೆ ಅವರಿಗೆ ಶೂನ್ಯ ಬಿಲ್ ಬರಲಿದೆ. ಜುಲೈ 27ರ ನಂತರ ನೋಂದಾಯಿಸಿಕೊಂಡವರನ್ನು ಆಗಸ್ಟ್ ಬಿಲ್ಲಿಂಗ್ಗೆ ಪರಿಗಣಿಸಲಾಗುತ್ತದೆ ಎಂದು ಸ್ವತಃ ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ಕೊಟ್ಟಿದ್ದಾರೆ.