Publish Date: Wed, 07 Sep 2022 (09:54 IST)
Updated Date: Wed, 07 Sep 2022 (09:18 IST)
ನವದೆಹಲಿ : ಕಾರಿನಲ್ಲಿ ಹಿಂದೆ ಕುಳಿತು ಸೀಟ್ ಬೆಲ್ಟ್ ಧರಿಸದೇ ಇರುವವರಿಗೆ ದಂಡ ವಿಧಿಸುವ ಕ್ರಮವನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಾರು ಅಪಘಾತದಲ್ಲಿ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮೃತಪಟ್ಟ ಎರಡು ದಿನಗಳ ನಂತರ ಈ ಕ್ರಮಕ್ಕೆ ಕೇಂದ್ರ ಸಚಿವರು ಮುಂದಾಗಿದ್ದಾರೆ.
ಈಗಾಗಲೇ ಹಿಂದಿನ ಸೀಟಿನಲ್ಲಿರುವವರೂ ಸೀಟ್ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಜನರು ಅದನ್ನು ಅನುಸರಿಸುತ್ತಿಲ್ಲ. ಹಾಗಾಗಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಹಿಂಬದಿ ಸೀಟಿನಲ್ಲಿರುವವರು ಕಡ್ಡಾಯವಾಗಿ ಬೆಲ್ಟ್ ಧರಿಸದೇ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ದಂಡ ವಸೂಲಿ ಮಾಡುವುದು ಸರ್ಕಾರದ ಉದ್ದೇಶವಲ್ಲ. ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಈ ನೀತಿಯ ಹಿಂದೆ 2024ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇ.50 ರಷ್ಟು ಕಡಿಮೆ ಮಾಡುವ ಗುರಿಯೂ ಇದೆ. ಹಾಗಾಗಿ ನಿಗಾ ವಹಿಸಲು ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಕನಿಷ್ಠ ದಂಡ 1 ಸಾವಿರ ರೂಪಾಯಿ ಇರುತ್ತದೆ ಎಂದು ವಿವರಿಸಿದ್ದಾರೆ.