Publish Date: Thu, 07 Apr 2022 (08:44 IST)
Updated Date: Thu, 07 Apr 2022 (08:47 IST)
ನವದೆಹಲಿ : ಏರ್ ಇಂಡಿಯಾ ವಿಮಾನದಲ್ಲಿ ಜೈನ ಪ್ರಯಾಣಿಕರಿಗೆ ಆಕಸ್ಮಿಕವಾಗಿ ಮಾಂಸಾಹಾರಿ ಆಹಾರವನ್ನು ನೀಡಿದ ಕೆಲವು ದಿನಗಳ ನಂತರ,
ಗುಜರಾತ್ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಜೈನ ಸಮುದಾಯವು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದು, ದೇಶೀಯ ವಿಮಾನಗಳಲ್ಲಿ ಮಾಂಸಾಹಾರ ಊಟವನ್ನು ನೀಡುವುದನ್ನು ನಿಷೇಧಿಸುವಂತೆ ಕೋರಿದೆ.
"ಸಸ್ಯಾಹಾರಿ ಪ್ರಯಾಣಿಕರ ಪರವಾಗಿ ಈ ವಿನಂತಿಯನ್ನು ಮಾಡಲಾಗುತ್ತಿದೆ. ಕಟ್ಟುನಿಟ್ಟಾದ ಸಸ್ಯಾಹಾರಿ ಪ್ರಯಾಣಿಕರಿಗೆ ಸಸ್ಯಾಹಾರಿ ಆಹಾರದ ಬದಲಿಗೆ ಮಾಂಸಾಹಾರಿ ಆಹಾರವನ್ನು ನೀಡಿದಾಗ ಹೆಚ್ಚು ತೊಂದರೆ ಮತ್ತು ಕಸಿವಿಸಿ ಅನುಭವಿಸುತ್ತಾರೆ" ಎಂದು ಮಂಡಳಿಯ ಸದಸ್ಯ ರಾಜೇಂದ್ರ ಶಾ ಪತ್ರದಲ್ಲಿ ತಿಳಿಸಿದ್ದಾರೆ.
ವಿಶೇಷವೆಂದರೆ, ಅಂತರರಾಷ್ಟ್ರೀಯ ಮಾರ್ಗದಲ್ಲಿ ಸಂಭವಿಸಿದ ಘಟನೆಗಾಗಿ ದೇಶೀಯ ವಿಮಾನಗಳಲ್ಲಿ ಮಾಂಸಾಹಾರಿ ಆಹಾರವನ್ನು ನಿಷೇಧಿಸುವಂತೆ ಗುಂಪು ಒತ್ತಾಯಿಸಿದೆ.
ಇತ್ತೀಚೆಗಷ್ಟೇ ಟ್ವಿಟರ್ನಲ್ಲಿ ತಮ್ಮ ಅನುಭವವನ್ನು ಬರೆದುಕೊಂಡಿದ್ದ ಪ್ರಯಾಣಿಕ ರಾಘವೇಂದ್ರ ಜೈನ್ ಅವರು, ಮಾರ್ಚ್ 25 ರಂದು ಏರ್ ಇಂಡಿಯಾ ವಿಮಾನದಲ್ಲಿ ಟೋಕಿಯೊದಿಂದ ದೆಹಲಿಗೆ ಕುಟುಂಬದೊಂದಿಗೆ ಪ್ರಯಾಣಿಸಿದ್ದಾಗಿ ಹೇಳಿದ್ದರು.
ತಾನು ಸಸ್ಯಾಹಾರಿ ಊಟವನ್ನು ಮೊದಲೇ ಬುಕ್ ಮಾಡಿದ್ದೆ ಮತ್ತು ಚೆಕ್-ಇನ್ ಕೌಂಟರ್ನಲ್ಲಿ ಅವುಗಳನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದ್ದರು. ಇದರ ನಡುವೆಯೂ ಸಿಬ್ಬಂದಿ ಮಾಂಸಾಹಾರಿ ಊಟ ನೀಡಿದ್ದರು ಎಂದಿದ್ದಾರೆ.