Publish Date: Fri, 27 Jul 2018 (09:07 IST)
Updated Date: Fri, 27 Jul 2018 (09:08 IST)
ಬೆಂಗಳೂರು: ಶತಮಾನದ ಸುದೀರ್ಘ ಖಗ್ರಾಸ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ, ಹವನಗಳು ನಡೆಯಲಿವೆ.
ಇಂದು ರಾತ್ರಿ 11.45 ರ ನಂತರ ಚಂದ್ರಗ್ರಹಣ ನಡೆಯಲಿದ್ದು, ಬೆಳಿಗ್ಗೆ 4 ಗಂಟೆಯವರೆಗೂ ಗ್ರಹಣ ಕಾಲವಿರುತ್ತದೆ. ಚಂದ್ರ ಕೇಸರಿ ಬಣ್ಣದಲ್ಲಿ ಗೋಚರಿಸುವುದು ಇಂದಿನ ವಿಶೇಷತೆ.
ಗ್ರಹಣದ ಪ್ರಯುಕ್ತ ನಾಡಿನ ವಿವಿಧ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ನಡೆಯಲಿವೆ. ಇನ್ನು ಕೆಲವೆಡೆ ಪೂಜಾ ಸಮಯದಲ್ಲಿ ಬದಲಾವಣೆಯಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ಇಂದು ಸಂಜೆ ಬೇಗನೇ ದೇವರ ದರ್ಶನ ನಡೆಯಲಿದೆ. ರಾತ್ರಿ ಪೂಜೆ ಬೇಗನೇ ನಡೆಯುವುದು. ಹೊರನಾಡಿನಲ್ಲಿ ಪೂಜೆ ಎಂದಿನಂತೆ ನಡೆಯುವುದಿದ್ದರೂ ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ.
ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯ, ನಿಮಿಷಾಂಬ ದೇವಾಲಯ, ಚಂದ್ರಮೌಳೇಶ್ವರ ದೇವಾಲಯಗಳಲ್ಲಿ ಸಂಜೆಯವರೆಗೆ ಮಾತ್ರ ದೇವರ ದರ್ಶನ ವ್ಯವಸ್ಥೆಯಿರುತ್ತದೆ. ನಾಡದೇವತೆ ಚಾಮುಂಡೇಶ್ವರಿ ದೇವಾಲಯದಲ್ಲೂ ರಾತ್ರಿ 9.30 ಕ್ಕೆ ಬಾಗಿಲು ಬಂದ್ ಆಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.