Publish Date: Mon, 26 Sep 2022 (09:53 IST)
Updated Date: Mon, 26 Sep 2022 (10:58 IST)
ಢಾಕಾ : ಬಾಂಗ್ಲಾದೇಶದ ಪಂಚಗಢ್ನ ಕರಟೋಯಾ ನದಿಯಲ್ಲಿ ಭಾನುವಾರ ದೋಣಿ ಮುಳುಗಿ 24 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಹಾಲಯ ಆಚರಣೆ ಹಿನ್ನೆಲೆ ಔಲಿಯಾ ಘಾಟ್ನಿಂದ ಬದ್ಧೇಶ್ವರ ದೇವಸ್ಥಾನದ ಕಡೆ ಹೋಗುತ್ತಿದ್ದ ದೋಣಿ ಮುಳುಗಿದೆ. ದೋಣಿಯಲ್ಲಿ ಬೋಡಾ, ಪಂಚ್ಪಿರ್, ಮಾರಿಯಾ ಹಾಗೂ ಬಂಘಾರಿ ಪ್ರದೇಶದ ಹಿಂದೂ ಸಮುದಾಯದ ಜನರು ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ದೋಣಿಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಲಾಗಿತ್ತು. ದೋಣಿ ನದಿಯ ಮಧ್ಯ ಭಾಗಕ್ಕೆ ಹೋಗುತ್ತಿದ್ದಂತೆ ಅದು ಮಗುಚಿ ಬಿದ್ದಿದೆ. ಘಟನೆಯಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ. ಆದರೆ ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪಂಚಗಢ ಜಿಲ್ಲಾಧಿಕಾರಿ ಮೊಹಮ್ಮದ್ ಜಹುರುಲ್ ಇಸ್ಲಾಂ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ತನಿಖೆಗೆ 5 ಸದಸ್ಯರ ತಂಡವನ್ನು ರಚಿಸಲಾಗಿದೆ. ನಾಪತ್ತೆಯಾದವರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬೋಡಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸುಜೋಯ್ ಕುಮಾರ್ ರಾಯ್ ತಿಳಿಸಿದ್ದಾರೆ.