Publish Date: Wed, 11 Jan 2023 (07:03 IST)
Updated Date: Wed, 11 Jan 2023 (09:32 IST)
ಬೆಂಗಳೂರು : ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಜಾರಿಗೆ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಧರ್ಮಗುರುಗಳ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆದಿದ್ದು, ಧರ್ಮಾತೀತವಾಗಿ ಎಲ್ಲಾ ಗುರುಗಳು ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಜಾರಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಸುವ ಸರ್ಕಾರದ ನಿರ್ಧಾರಕ್ಕೆ ಧರ್ಮಾತೀತವಾಗಿ ಧರ್ಮಗುರುಗಳು ಸಹಮತ ವ್ಯಕ್ತಪಡಿಸಿದರು. ಶಿಕ್ಷಣ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಮಠಾಧೀಶರು, ಧರ್ಮಗುರುಗಳು, ಶಿಕ್ಷಣ ತಜ್ಞರ ದುಂಡು ಮೇಜಿನ ಸಭೆಯಲ್ಲಿ ಶಾಲಾ ಹಂತದಲ್ಲಿ ಕಡ್ಡಾಯವಾಗಿ ನೈತಿಕ ಶಿಕ್ಷಣ ಅವಶ್ಯಕತೆ ಇದೆ ಎಂದು ಧರ್ಮ ಗುರುಗಳು ಸಲಹೆ ನೀಡಿದ್ದಾರೆ. ಅಲ್ಲದೆ ನೈತಿಕ ಶಿಕ್ಷಣದಲ್ಲಿ ಯಾವ ಯಾವ ಮೌಲ್ಯಯುತ ಅಂಶಗಳು ಸೇರಿಸಬೇಕು ಎಂದು ಹೇಳಿದ್ದಾರೆ.
ಸಭೆಯಲ್ಲಿ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಸಿರಿಗೆರೆ ಶ್ರೀಗಳು, ರವಿಶಂಕರ್ ಗುರೂಜಿ, ಪೇಜಾವರ ಶ್ರೀಗಳು, ಮಾದಾರ ಚೆನ್ನಯ್ಯ ಶ್ರೀಗಳು, ರಾಘವೇಶ್ವರ ಶ್ರೀಗಳು, ಪೀಟರ್ ಮ್ಯಾಚಾರೋ, ಡಾ. ಕಸ್ತೂರಿ ರಂಗನ್, ಅಬ್ದುಲ್ ರಹೀಂ ಸೇರಿ ಹಲವು ಧರ್ಮಗಳ ಧರ್ಮಗುರುಗಳು ಭಾಗವಹಿಸಿ ಅಭಿಪ್ರಾಯ ತಿಳಿಸಿದರು.
ನೈತಿಕ ಶಿಕ್ಷಣ ಜಾರಿ ಪ್ರಕ್ರಿಯೆಗೆ ಸಮಿತಿ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ಜಾರಿ ಮಾಡೋದಾಗಿ ತಿಳಿಸಿದರು.