Publish Date: Tue, 13 Sep 2022 (15:20 IST)
Updated Date: Tue, 13 Sep 2022 (15:23 IST)
ನವದೆಹಲಿ : ಜುಲೈನಲ್ಲಿ ಶೇ. 6.71ರಷ್ಟಿದ್ದ ಭಾರತದ ಚಿಲ್ಲರೆ ಹಣದುಬ್ಬರವು ಆಗಸ್ಟ್ನಲ್ಲಿ ಶೇ. 7ಕ್ಕೆ ಏರಿಕೆ ಕಂಡಿದೆ.
ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳು ಸಹ ಚಿಲ್ಲರೆ ಹಣದುಬ್ಬರ ಏರುಮುಖವಾಗಿತ್ತು, ಜೂನ್ನಲ್ಲಿ ಈ ದರವು ಶೇ. 7.01ಕ್ಕೆ ತಲುಪಿತ್ತು. ಸತತ 8ನೇ ತಿಂಗಳು ಈ ದರವು ಶೇ. 6ರಕ್ಕಿಂತಲೂ ಅಧಿಕ ಮಟ್ಟದಲ್ಲಿ ಮುಂದುವರಿದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಚಿಲ್ಲರೆ ಹಣದುಬ್ಬರಕ್ಕೆ ಶೇ.6ರ ಮಿತಿ ನಿಗದಿಪಡಿಸಿದೆ.
ಆಹಾರ ಪದಾರ್ಥಗಳ ಹಣದುಬ್ಬರ ದರವು ಆಗಸ್ಟ್ನಲ್ಲಿ ಶೇ. 7.62ಕ್ಕೆ ಹೆಚ್ಚಳವಾಗಿದೆ. ಈ ದರವು ಜುಲೈನಲ್ಲಿ ಶೇ. 6.75ಕ್ಕೆ ಇಳಿಕೆಯಾಗಿತ್ತು. ಮಳೆ ಹಾಗೂ ಬೆಳೆ ಹಾನಿಯ ಕಾರಣಗಳಿಂದ ತರಕಾರಿ ಬೆಲೆ ಏರಿಕೆ ಆಗಿದ್ದು, ತರಕಾರಿ ಹಣದುಬ್ಬರವು ಆಗಸ್ಟ್ನಲ್ಲಿ ಶೇ 13.23ಕ್ಕೆ ತಲುಪಿದೆ.
ವಾರ್ಷಿಕ ಆಧಾರದ ಮೇಲೆ ತರಕಾರಿಗಳು, ಸಾಂಬಾರ್ ಪದಾರ್ಥಗಳು, ಪಾದರಕ್ಷೆಗಳು ಮತ್ತು ಇಂಧನ ಮತ್ತು ಲೈಟ್ ಬೆಲೆ ಏರಿಕೆಯ ದರವು ಶೇಕಡಾ 10 ಕ್ಕಿಂತ ಹೆಚ್ಚಾಗಿದೆ.