Publish Date: Mon, 09 May 2022 (07:45 IST)
Updated Date: Mon, 09 May 2022 (00:57 IST)
ಬೆಂಗಳೂರು : ಹಿಜಬ್, ಹಲಾಲ್, ವ್ಯಾಪಾರ ಬ್ಯಾನ್ ಬಳಿಕ ರಾಜ್ಯದಲ್ಲಿ ಆಜಾನ್ ಗಲಾಟೆ ತಾರಕಕ್ಕೇರಿದೆ.
ಆಜಾನ್ ಕೂಗಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ನಾಳೆಯಿಂದ ಬೆಳಗ್ಗೆ 5 ಹಿಂದೂ ದೇವಾಲಯಗಳಲ್ಲಿ, ಮಠಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಹಾಗೂ ಸುಪ್ರಭಾತವನ್ನು, ಮೈಕ್ ಮೂಲಕ ಪಠಿಸುವ ಆಂದೋಲನಕ್ಕೆ ಶ್ರೀರಾಮ ಸೇನೆ ಮುಂದಾಗಿದೆ.
ಈ ಅಭಿಯಾನಕ್ಕೆ ಕೈಜೋಡಿಸುವಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನವಿ ಮಾಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಪ್ರಮುಖ ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡಿದ ಶ್ರೀರಾಮಸೇನೆ ಸದಸ್ಯರು ಬೆಳಗ್ಗಿನ ಜಾವ ದೇವಸ್ಥಾನ ಮತ್ತು ಮಠದ ಮೈಕ್ನಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಹಾಕುವಂತೆ ಮನವಿ ಪತ್ರ ನೀಡುತ್ತಿದ್ದಾರೆ.
ಹಾಸನದಲ್ಲೂ ಅಭಿಯಾನಕ್ಕೆ ಕೈ ಜೋಡಿಸಲಿದ್ದು, ಪ್ರತಿನಿತ್ಯ ಮೈಕ್ ಮೂಲಕ ಭಜನೆ ಮಾಡುವುದಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು.
ಇತ್ತ ಆಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿಗೀತೆ ಮೊಳಗಿಸುವ ಅಭಿಯಾನಕ್ಕೆ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ. ಧಾರವಾಡ ನಗರದ ಲೈನ್ ಬಜಾರ್ ಹನುಮಾನ್ ದೇವಸ್ಥಾನ, ನಗರದ ತುಳಜಾ ಭವಾನಿ ದೇವಸ್ಥಾನ, ಶಿವಾಲಯ, ದತ್ತಾತ್ರೇಯ ದೇವಸ್ಥಾನ ಸೇರಿ ಹಲವು ದೇವಸ್ಥಾನ ಕಮಿಟಿಯವರು ನಿರ್ಧರಿಸಿದ್ದಾರೆ.