Publish Date: Wed, 04 Jul 2018 (09:26 IST)
Updated Date: Wed, 04 Jul 2018 (09:32 IST)
ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ತೆರೆಮರೆಯ ಕಸರತ್ತು ನಡೆಸುತ್ತಿವೆ.
ಸದ್ಯಕ್ಕೆ ಹಂಗಾಮಿ ಸ್ಪೀಕರ್ ಆಗಿರುವ ಜೆಡಿಎಸ್ ನ ಬಸವರಾಜ ಹೊರಟ್ಟಿಯವರನ್ನೇ ಖಾಯಂ ಸ್ಪೀಕರ್ ಆಗಿ ಮುಂದುವರಿಸಲು ಜೆಡಿಎಸ್ ಪ್ರಯತ್ನ ನಡೆಸಿದೆ. ಇದಕ್ಕಾಗಿ ಮಿತ್ರ ಪಕ್ಷ ಕಾಂಗ್ರೆಸ್ ಜತೆ ಚೌಕಾಶಿ ನಡೆಸುತ್ತಿದೆ.
ಸಮನ್ವಯ ಸಮಿತಿ ಸದಸ್ಯರಾಗಿರುವ ಜೆಡಿಎಸ್ ಕಾರ್ಯದರ್ಶಿ ಡ್ಯಾನಿಶ್ ಅಲಿ ಇಂದು ಈ ಕುರಿತಾಗಿ ಸಿದ್ದರಾಮಯ್ಯ, ಡಾ ಜಿ ಪರಮೇಶ್ವರ್ ಮತ್ತು ಕೆಸಿ ವೇಣುಗೋಪಾಲ್ ಜತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಸ್ಪೀಕರ್ ಸ್ಥಾನವನ್ನು ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ಲಾಬಿ ನಡೆಸಲಿದ್ದಾರೆ. ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ನ ರಮೇಶ್ ಕುಮಾರ್ ಇರುವುದರಿಂದ ಪರಿಷತ್ ಸಭಾಪತಿ ಸ್ಥಾನ ತನಗೇ ಸಿಗಬೇಕೆಂಬುದು ಜೆಡಿಎಸ್ ಪಟ್ಟು. ಅತ್ತ ಕಾಂಗ್ರೆಸ್ ಹಠ ಬಿಡುತ್ತಿಲ್ಲ, ಇತ್ತ ಜೆಡಿಎಸ್ ಪಟ್ಟು ಬಿಡುತ್ತಿಲ್ಲ ಎನ್ನುವಂತಾಗಿದೆ. ಇದಕ್ಕೆಲ್ಲಾ ಇಂದು ಸಂಜೆ ಉತ್ತರ ಸಿಗುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.