Publish Date: Fri, 06 Jul 2018 (09:15 IST)
Updated Date: Fri, 06 Jul 2018 (09:17 IST)
ಬೆಂಗಳೂರು: ಈ ಬಾರಿಯ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕರಾವಳಿ, ಮಲೆನಾಡಿಗೆ ತೀರಾ ನಿರಾಶೆಯಾಗಿದೆ. ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಬಹುಪಾಲು ಹಾಸನ, ರಾಮನಗರ, ಹಳೆ ಮೈಸೂರು ಭಾಗಗಳಿಗೆ ಸಿಕ್ಕಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.
ಕರಾವಳಿಯಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಬಿಜೆಪಿಯೇ ಗೆದ್ದಿತ್ತು. ಆ ಭಾಗಕ್ಕೆ ಯಾವುದೇ ಅನುದಾನ ಕೊಡದೇ ಸಿಎಂ ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಬಜೆಟ್ ನಂತರ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತ ಕರಾವಳಿ ಭಾಗದ ಜನತೆ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಮಂಡ್ಯ, ಹಾಸನ, ರಾಮನಗರ ಬಜೆಟ್ ಎಂದು ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲೆ ಜತೆಗೆ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕರ್ನಾಟಕವನ್ನೂ ಬಜೆಟ್ ನಲ್ಲಿ ನಿರ್ಲಕ್ಷಿಸಿರುವುದು ಬಿಜೆಪಿ ಟೀಕೆಗೆ ಗುರಿಯಾಗಿದೆ. ರಾಜ್ಯದ ಇಡೀ ಹಣವನ್ನು ಕೇವಲ ತಮ್ಮನ್ನು ಗೆಲ್ಲಿಸಿದ ಮೂರು ಕ್ಷೇತ್ರಗಳಿಗೆ ಸಿಎಂ ಹಂಚಿರುವುದು ಅಕ್ಷಮ್ಯ ಎಂದು ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಕರಾವಳಿ ಜನರಿಗಾದ ಅನ್ಯಾಯದ ವಿರುದ್ಧ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿಯೂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.