Publish Date: Fri, 25 May 2018 (15:45 IST)
Updated Date: Fri, 25 May 2018 (15:49 IST)
ಬೆಂಗಳೂರು: ಅಂತೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಸದನದ ಒಪ್ಪಿಗೆ ಸಿಕ್ಕಿದೆ. ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಗೆಲುವಾಗಿದೆ.
ಸ್ಪೀಕರ್ ಆಗಿ ಶಾಸಕ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಅದಾದ ಬಳಿಕ ನೂತನ ಸ್ಪೀಕರ್ ಗೆ ಅಭಿನಂದನಾ ಭಾಷಣಗಳನ್ನು ವಿವಿಧ ಪಕ್ಷದ ನಾಯಕರು ನಡೆಸಿದರು.
ಸ್ಪೀಕರ್ ಕೆಲ ನಿಮಿಷ ಮಾತನಾಡಿದ ಬಳಿಕ ಸಿಎಂ ಕುಮಾರಸ್ವಾಮಿ ಪ್ರಸ್ತಾವನೆ ಸಲ್ಲಿಸಲು ಅವಕಾಶ ನೀಡಲಾಯಿತು. ಪ್ರಸ್ತಾವನೆ ನಂತರ ಚರ್ಚೆಗೆ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ವಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಕುಮಾರಸ್ವಾಮಿ ಮತ್ತು ಜೆಡಿಎಸ್ ವಿರುದ್ಧ ತಿರುಗೇಟು ನೀಡಿದರು.
ಇದಾದ ಬಳಿಕ ರೈತರ ಸಾಲ ಸಂಪೂರ್ಣ ಮನ್ನಾ ಮಾಡದಿದ್ದರೆ ರಾಜ್ಯವ್ಯಾಪಿ ಸೋಮವಾರ ಬಂದ್ ಗೆ ಕರೆ ಮಾಡುವುದಾಗಿ ಹೇಳಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು.
ಇದರ ಬಳಿಕ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಆರೋಪಗಳಿಗೆ ಉತ್ತರ ನೀಡಿದರು. ಆದರೆ ಅಷ್ಟರಲ್ಲಿ ಸದನದಲ್ಲಿ ಬಿಜೆಪಿಯ ಯಾವುದೇ ಸದಸ್ಯರೂ ಇರಲಿಲ್ಲ. ಈ ವೇಳೆ ವಿಶ್ವಾಸ ಮತ ಪ್ರಕ್ರಿಯೆ ನಡೆದಿದ್ದು, ಸರ್ಕಾರದ ಪರವಾಗಿ ಮತಗಳು ಬಂದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮೊದಲ ಪರೀಕ್ಷೆಯಲ್ಲಿ ಗೆದ್ದು ಅಧಿಕೃತವಾಗಿ ಸರ್ಕಾರಕ್ಕೆ ಅಸ್ಥಿತ್ವಕ್ಕೆ ಬಂದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.