Publish Date: Thu, 25 Nov 2021 (08:01 IST)
Updated Date: Thu, 25 Nov 2021 (08:04 IST)
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ಭಾರತ ತಂಡ ಇದೀಗ ಟೆಸ್ಟ್ ಸರಣಿ ಮೇಲೆ ಕಣ್ಣಿಟ್ಟಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಇಂದಿನಿಂದ ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಈಗಾಗಲೇ ತಿಳಿದಿರುವಂತೆ ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಕಿವೀಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಅಜಿಂಕ್ಯಾ ರಹಾನೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದು, ಶ್ರೇಯಸ್ ಅಯ್ಯರ್ ಟೆಸ್ಟ್ಗೆ ಪದಾರ್ಪಣೆ ಮಾಡಲಿದ್ದಾರೆ. ಉಭಯ ತಂಡಗಳಿಗೆ ಇದೊಂದು ಸೇಡಿನ ಪಂದ್ಯವಾಗಿದೆ. ನ್ಯೂಜಿಲೆಂಡ್ ತಂಡ ಟಿ20 ಸರಣಿಯಲ್ಲಿ ಅನುಭವಿಸಿದ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳುವ ಕಾತುರದಲ್ಲಿದ್ದರೆ, ಇತ್ತ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋತಿದ್ದಕ್ಕೆ ತಕ್ಕ ಉತ್ತರ ನೀಡಲು ತಯಾರಾಗಿದೆ. ಹೀಗಾಗಿ ಕಾನ್ಪುರ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಗಾಯಗೊಂಡಿರುವ ಕೆಎಲ್. ರಾಹುಲ್ ಅವರಿಲ್ಲದೇ ಕಣಕ್ಕಿಳಿಯುತ್ತಿರುವ ತಂಡದಲ್ಲಿ ಯುವ ಆಟಗಾರರಿಗೆ ಮಿಂಚಲು ಅವಕಾಶ ಲಭಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಶುಭ್ಮನ್ ಗಿಲ್ ಇನಿಂಗ್ಸ್ ಆರಂಭಿಸುವರು. ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವುದು ಖಚಿತವಾಗಿದೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಕ್ರೀಸ್ಗೆ ಬರುವುದು ಖಚಿತ. ಸುಮಾರು ಒಂದು ವರ್ಷದಿಂದ ಶತಕದ ಬರ ಎದುರಿಸುತ್ತಿರುವ ಪೂಜಾರ ಇಲ್ಲಿ ಮತ್ತೆ ಲಯಕ್ಕೆ ಮರಳುವ ನಿರೀಕ್ಷೆ ಇದೆ.