Publish Date: Fri, 02 Feb 2018 (19:35 IST)
Updated Date: Fri, 02 Feb 2018 (19:38 IST)
ಇದೊಂದು ನೈಜ ಕಥೆ. 1812 ರಿಂದ 1828 ರಲ್ಲಿ ಪ್ರಸ್ತುತ ತಮಿಳುನಾಡಿನ ಮದುರೈಗೆ ಕಲೆಕ್ಟರ್ ಆಗಿ ರೋಸ್ ಪೀಟರ್ ಎಂಬ ಬ್ರಿಟೀಷ್ ಕಲೆಕ್ಟರ್ ನೇಮಕಗೊಂಡಿದ್ದರು. ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರೂ ಸಹ ಹಿಂದೂ ಧರ್ಮಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಿದ್ದರು ಮತ್ತು ಸ್ಥಳೀಯ ಪದ್ಧತಿಗಳಿಗೆ ಹೆಚ್ಚು ಗೌರವ ಸೂಚಿಸುತ್ತಿದ್ದರು.
ರೋಸ್ ಪೀಟರ್ ಅವರು ಎಲ್ಲಾ ಧರ್ಮದವರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು ಎಂದು ಹೇಳುತ್ತಾರೆ. ಅವರ ಈ ನಡವಳಿಕೆಯಿಂದಾಗಿ ಅವರ ಹೆಸರು ಹೆಚ್ಚು ಪ್ರಚಲಿತವಾಯಿತು.
ತಮಿಳುನಾಡಿನ ಪ್ರಸಿದ್ಧ ಮೀನಾಕ್ಷಿ ಅಮ್ಮನ ದೇವಸ್ಥಾನವು ಪೀಟರ್ ಅವರ ಮನೆ ಹಾಗೂ ಕಚೇರಿಯ ನಡುವೆ ಇತ್ತು. ಈ ಕಾರಣದಿಂದಾಗಿ ಅವರು ದಿನವೂ ತಮ್ಮ ಕಚೇರಿಗೆ ಹೋಗುವಾಗ ಮೀನಾಕ್ಷಿ ಅಮ್ಮನ ದೇವಸ್ಥಾನದ ಮೂಲಕ ಹಾದು ಹೋಗಬೇಕಾಗಿತ್ತು, ಅವರು ದಿನವೂ ಕುದುರೆಯ ಮೇಲೆ ಹೋಗುತ್ತಿದ್ದರು, ಮೀನಾಕ್ಷಿ ಅಮ್ಮನ ದೇವಸ್ಥಾನ ಬಂದಾಗ, ಅವರು ಕುದುರೆಯಿಂದ ಕೆಳಗಿಳಿದು, ತಮ್ಮ ಹ್ಯಾಟ್ ಮತ್ತು ಶೂಗಳನ್ನು ತೆಗೆದು ತಮ್ಮ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿದ್ದರು. ಈ ಮೂಲಕ ಅವರು ಮೀನಾಕ್ಷಿ ಅಮ್ಮನಿಗೆ ತಮ್ಮ ಗೌರವವನ್ನು ಸೂಚಿಸುತ್ತಿದ್ದರು.
ಒಂದು ದಿನ ಮದುರೈ ನಗರದಲ್ಲಿ ಹೆಚ್ಚು ಮಳೆ ಪ್ರಾರಂಭವಾಯಿತು. ಕಲೆಕ್ಟರ್ ಅವರು ತಮ್ಮ ಮನೆಯಲ್ಲಿ ಮಲಗಿದ್ದರು, ಆಕಸ್ಮಿಕವಾಗಿ ಅವರಿಗೆ ಕಾಲಂದಿಗೆಯ ಶಬ್ದದಿಂದ ಎಚ್ಚವಾಯಿತು, ಅವರು ತಮ್ಮ ಹಾಸಿಗೆಯಿಂದ ಎದ್ದು ಶಬ್ದ ಎಲ್ಲಿನಿಂದ ಬರುತ್ತಿದೆ ಎಂದು ನೋಡಿದರು. ಅವರ ಕಣ್ಣಿಗೆ ಒಬ್ಬ ಆಭರಣಗಳನ್ನು ಧರಿಸಿರುವ ಹುಡುಗಿ ಕಾಣಿಸಿತು ಮತ್ತು ಇವರನ್ನು 'ಪೀಟರ್ ಹೊರಗೆ ಬಾ' ಎಂದು ಕರೆಯುತ್ತಿರುವುದು ಕೇಳಿಸಿತು. ಅದನ್ನು ಕೇಳಿಸಿಕೊಂಡು ಅವರು ಮನೆಯಿಂದ ತಕ್ಷಣವೇ ಹೊರಬಂದು ಆ ಓಡುತ್ತಿದ್ದ ಹುಡುಗಿಯನ್ನು ಮಳೆಯಲ್ಲಿಯೇ ಹಿಂಬಾಲಿಸಿದರು. ನಂತರ ತಕ್ಷಣವೇ ಅವರ ಮನೆಯು ಕೆಲವೇ ಕ್ಷಣಗಳಲ್ಲಿ ಕುಸಿದು ಬಿತ್ತು. ನಂತರ ಅವರು ಹಿಂತಿರುಗಿ ನೋಡಿದರೆ ಆ ಹುಡುಗಿ ಓಡುತ್ತಿರುವಂತೆ ಮಾಯವಾದಳು. ಆ ವೇಳೆಯಲ್ಲಿ ಪೀಟರ್ ಅವರು ಆ ಹುಡುಗಿ ಕಾಲಿನಲ್ಲಿ ಅಂದಿಗೆಯೊಂದಿಗೆ ಬರಿಗಾಲಿನಲ್ಲಿ ಯಾವುದೇ ಪಾದುಕೆಗಳಿಲ್ಲದೆಯೇ ಓಡುತ್ತಿರುವುದನ್ನು ಗಮನಿಸಿದರು. ಅವರು ಸಾಕ್ಷಾತ್ ಮೀನಾಕ್ಷಿ ಅಮ್ಮನೇ ತಮ್ಮ ಪ್ರಾಣವನ್ನು ಉಳಿಸಿದಳು ಎಂದು ಅರಿತುಕೊಂಡರು ಮತ್ತು ನಂಬಿದರು.
ಕೆಲವು ದಿನಗಳ ನಂತರ ಮೀನಾಕ್ಷಿ ಅಮ್ಮನಿಗೆ ದೇವಸ್ಥಾನದಲ್ಲಿ ಇಲ್ಲದ ಯಾವುದಾದರೂ ಕಾಣಿಕೆಯನ್ನು ನೀಡಬೇಕೆಂದು ಬಯಸಿದರು. ಇದರ ಕುರಿತು ತಿಳಿದುಕೊಳ್ಳಲು ಅವರು ದೇವಸ್ಥಾನದ ಅರ್ಚಕರ ಬಳಿ ಚರ್ಚಿಸಿ ಒಂದು ಜೊತೆ ಬಂಗಾರದ ಪಾದುಕೆಗಳನ್ನು ಮಾಡಿಸಿಕೊಡುವುದಾಗಿ ಒಪ್ಪಿಕೊಂಡರು. ಇವರು ಮಾಡಿಸಿಕೊಟ್ಟಂತಹ ಪಾದುಕೆಗಳು 412 ಮಾಣಿಕ್ಯ ಕಲ್ಲುಗಳು ಮತ್ತು 80 ವಜ್ರಗಳನ್ನು ಹೊಂದಿದೆ ಮತ್ತು ಅವರ ಹೆಸರು 'ಪೀಟರ್' ಎಂದು ಪಾದುಕೆಗಳ ಕೆಳಭಾಗದಲ್ಲಿ ಕೆತ್ತಲಾಗಿದೆ. ಈಗಲೂ ಸಹ ಆ ಪಾದುಕೆಗಳನ್ನು 'ಪೀಟರ್ ಪಾದುಕಂ' ಎಂದು ಕರೆಯಲಾಗುತ್ತದೆ.
ಆ ಪಾದುಕೆಗಳನ್ನು ಈಗಲೂ ಸಹ ದೇವಸ್ಥಾನದಲ್ಲಿ ಕಾಪಾಡಲಾಗಿದೆ ಮತ್ತು ಪ್ರತಿ ವರ್ಷ 'ಚಿತ್ರಾ ಉತ್ಸವ' ಸಮಯದಲ್ಲಿ, ಈ ಪಾದುಕೆಗಳನ್ನು ಉತ್ಸವ ಮೂರ್ತಿ ಮೀನಾಕ್ಷಿ ಈ ಪಾದುಕೆಗಳನ್ನು ತೊಡುತ್ತಾಳೆ. ಇದೊಂದು ನೈಜ ಸಂಗತಿಯಾಗಿದೆ ಎಂದು ಹೇಳಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.