Publish Date: Wed, 24 Aug 2016 (15:12 IST)
Updated Date: Thu, 25 Aug 2016 (11:13 IST)
ಎಲ್ಲರ ಹೃದಯದಲ್ಲೂ ವಿಶೇಷ ಸ್ಥಾನ ಪಡೆದಿರುವ ಕೃಷ್ಣನದು ಪರಿಪೂರ್ಣ ಬದುಕನ್ನು ಹೇಗೆ ಸವಿಯುವುದೆಂದು ಸಂಪೂರ್ಣ ಮಾನವ ಕುಲಕ್ಕೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿತ್ವ. ಎಲ್ಲರ ಮನಸ್ಸಲ್ಲೂ ಸ್ಪೂರ್ತಿಯನ್ನು ಉಕ್ಕಿಸಬಲ್ಲ ಮಾನವರೂಪದಲ್ಲಿ ಬಂದ ದೈವ ಗೋವಿಂದನ ಜನ್ಮದಿನವನ್ನು ಈ ಬಾರಿ, ಗುರುವಾರ ಆಗಸ್ಟ್ 25 ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಆತನ ವ್ಯಕ್ತಿತ್ವ ಉತ್ಸಾಹ , ಪ್ರಶಾಂತತೆ, ಸದಾಚಾರ ಮತ್ತು ಎಲ್ಲಾ ದೈವತ್ವದ ಮೇಲ್ಮಟ್ಟವನ್ನು ಪ್ರತಿಬಿಂಬಿಸುತ್ತದೆ. ವಿಷ್ಣುವಿನ ಒಂದು ಅವತಾರವಾಗಿ ಭೂಮಿಯ ಮೇಲೆ ಜನಿಸಿದ ಕೃಷ್ಣನಲ್ಲಿ ದೈವಿಕ ಶಕ್ತಿ ಅಮೋಘವಾಗಿದ್ದರೂ ಒಬ್ಬ ಸಾಮಾನ್ಯ ಮನುಷ್ಯನ ರೀತಿಯಲ್ಲಾತ ಬದುಕಿದ.
ಹಿಂದೂ ಧರ್ಮದ ಪ್ರತಿ ದೇವತೆಗಳು ವಿಶಿಷ್ಟ ರೂಪ ಮತ್ತು ದಿವ್ಯ ಪ್ರಭೆಯನ್ನು ಹೊಂದಿರುತ್ತಾರೆ. ಕೃಷ್ಣನ ವಿಷಯಕ್ಕೆ ಬಂದರೂ ಸಹ ಆ ವಿಭಿನ್ನತೆಯನ್ನು ಕಾಣುತ್ತೇವೆ. ದಿವ್ಯ ಪ್ರೇಮಕ್ಕೆ ಅನ್ವರ್ಥಕ ಎನ್ನಿಸಿಕೊಂಡ ಗೋಪಾಲನ ಜಯಂತಿಯಂದು ಆತನಿಗೆ ಬಹಳ ಪ್ರಿಯವಾದ, ಆತನನ್ನು ಸಂಕೇತಿಸುವ ವಿಷಯಗಳ ಬಗ್ಗೆ ಅವಲೋಕಿಸೋಣ.
ನವಿಲು ಗರಿ: ತಲೆಯಲ್ಲಿ ನವಿಲುಗರಿಯನ್ನು ಸಿಕ್ಕಿಸಿಕೊಂಡಿರದ ಕೃಷ್ಣನನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾದ ಮಾತೇ. ಆತ ಸದಾ ನವಿಲುಗರಿಯೊಂದಿಗೆ ಕಾಣಿಸಿಕೊಳ್ಳುತ್ತಾನೆ.
ಹಳದಿ ಧೋತಿ: ಹಳದಿ ಬಣ್ಣದ ಧೋತಿ ಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು . ಹಳದಿ ಧೋತಿ ಆತನ ಸಂಕೇತಗಳಲ್ಲೊಂದು.
ಕೊಳಲು: ಕೊಳಲಿಲ್ಲದೇ ಕೃಷ್ಣ ಅಪೂರ್ಣ. ಮುರಳಿ ಮನೋಹರ, ಮುರಳಿ ಲೋಲ, ಮುರಳೀಧರ ಎಂದು ಕರೆಸಿಕೊಳ್ಳುವ ಕೃಷ್ಣನಿಗೆ ಸಂಗೀತ ಉಪಕರಣ ಕೊಳಲನ್ನು ನುಡಿಸುವುದೆಂದರೆ ಅತಿಯಾದ ಪ್ರೀತಿ. ಆತನ ಕೊಳಲುಗಾನಕ್ಕೆ ಪ್ರಾಣಿಗಳು, ಸಸ್ಯಗಳು ಭಾವಪರವಶವಾಗುತ್ತಿದ್ದವು ಎನ್ನಲಾಗುತ್ತಿದೆ.
`
ಮೊಸರು: ನವನೀತ (ಮೊಸರು) ಚೋರ ಎಂದು ಕರೆಸಿಕೊಳ್ಳುವ ಕೃಷ್ಣ ಬಾಲ್ಯದಲ್ಲಿ ಮೊಸರನ್ನು ಕದಿಯುತ್ತಿದ್ದ. ಅದು ಆತನಿಗೆ ಬಹಳ ಇಷ್ಟದ ತಿನಿಸು. ಶ್ವೇತ ಮೊಸರು ಬಿಳಿ ಬಣ್ಣದಂತಹ ಶುದ್ಧ ಹೃದಯದ ಸಂಕೇತ. ಚಿತ್ತಚೋರ ಎನ್ನಿಸಿಕೊಂರುವ ಕೃಷ್ಣ ಜನರ ಮನಸ್ಸನ್ನು ಕದ್ದು ಅಲ್ಲಿಯೇ ಆಶ್ರಯವನ್ನು ಮಾಡಿಕೊಳ್ಳುತ್ತಾನೆ.
ದನಕರು: ಗೋವು, ಕರುವಿನ ಮೇಲಿನ ಕೃಷ್ಣನ ಪ್ರೇಮ ಎಲ್ಲರಿಗೂ ತಿಳಿದದ್ದೇ. ಆತನ ಗೋ ಪ್ರೀತಿ ದಯಾಳು ಸ್ವಭಾವದ ಪ್ರತೀಕ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.