ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಎಣೆಯೇ ಇಲ್ಲವಾಗಿದೆ. ಸಾಮಾನ್ಯರ ಮಾತು ಬಿಡಿ, ರಕ್ಷಣೆ ಮಾಡುವವವರೇ ಇಲ್ಲಿ ಸುರಕ್ಷಿತವಾಗಿಲ್ಲ ಎಂಬುದನ್ನು ಸ್ಪಷ್ಟೀಕರಿಸುವ ಘಟನೆಯೊಂದು ರಾಜ್ಯದಲ್ಲಿ ನಡೆದಿದ್ದು ಸಶಸ್ತ್ರಧಾರಿ ಗೂಂಡಾಗಳು ಪೊಲೀಸ್ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಕೊಂದು ಹಾಕಿದ್ದಾರೆ.
ಬುಧವಾರ ತಡರಾತ್ರಿ ಬರೇಲಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಮೂವರು ದರೋಡೆಕೋರರ ಬಗ್ಗೆ ಮಾಹಿತಿ ಪಡೆದ ಸಬ್ ಇನ್ಸಪೆಕ್ಟರ್ ಸರ್ವೇಶ್ ಯಾದವ್ ಮತ್ತೆ ಕೆಲವು ಪೊಲೀಸ್ ಸಿಬ್ಬಂದಿ ಜತೆ ಅವರನ್ನು ಬಂಧಿಸಲು ತೆರಳಿದ್ದಾರೆ. ಆದರೆ ದರೋಡೆಕೋರರು ಅವರನ್ನು ಗನ್ನಿಂದ ಶೂಟ್ ಮಾಡಿದ್ದಾರೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಯಾದವ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ದರೋಡೆಕೋರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಉಳಿದ ಪೊಲೀಸರಿಗೂ ಗಾಯಗಳಾಗಿವೆ. ಅವರಲ್ಲಿ ಪ್ರಮೋದ್ ಎಂಬುವವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರೋಡೆಕೋರರಲ್ಲಿ ಒಬ್ಬನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಮತ್ತಿಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.