Publish Date: Fri, 22 Mar 2024 (10:42 IST)
Updated Date: Fri, 22 Mar 2024 (10:47 IST)
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ನಿನ್ನೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ರಾತ್ರೋ ರಾತ್ರಿ ಬಂಧಿಸಿದ್ದಾರೆ. ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದೆಹಲಿ ಸಿಎಂ ಕೇಜ್ರಿವಾಲ್ ಬಂಧನ ಮೋದಿ ಸರ್ಕಾರದ ಧ್ವೇಷದ ನೀತಿಯೇ ಕಾರಣ. ಚುನಾವಣೆಯಲ್ಲಿ ವಿಪಕ್ಷಗಳನ್ನು ದಮನಿಸಲು ಮೋದಿ ಸರ್ಕಾರ ಈ ಹಾದಿ ಹಿಡಿದಿದೆ ಎಂದು ವಿಪಕ್ಷಗಳು ಕೆಂಡ ಕಾರುತ್ತಿವೆ. ಆದರೆ ಅಸಲಿಗೆ ಸಿಎಂ ಕೇಜ್ರಿವಾಲ್ ರನ್ನು ಬಂಧಿಸಿದ್ದು ಯಾಕೆ ಎಂಬ ವಿವರ ಇಲ್ಲಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು 9 ಬಾರಿ ಸಮನ್ಸ್ ನೀಡಿಯೂ ಹಾಜರಾಗದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಬಂಧನಕ್ಕೆ ಕೆಲವೇ ಕ್ಷಣಗಳ ಮೊದಲು ಬಂಧನಕ್ಕೆ ತಡೆ ಕೋರಿ ಕೇಜ್ರಿವಾಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿ ತಳ್ಳಿ ಹಾಕಿತ್ತು. ಹೀಗಾಗಿ ತಕ್ಷಣವೇ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
2021-22 ರಲ್ಲಿ ದೆಹಲಿ ಅಬಕಾರಿ ನೀತಿ ಜಾರಿಗೆ ತರಲು ಎಎಪಿ 100 ಕೋಟಿ ರೂ. ಕಿಕ್ ಬ್ಯಾಕ್ ಪಡೆದುಕೊಂಡಿತ್ತು ಎಂದು ಇಡಿ ಆರೋಪ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ರನ್ನು ವಿಚಾರಣೆಗೊಳಪಡಿಸಲು ಇಡಿ ಹಲವು ಬಾರಿ ನೋಟಿಸ್ ನೀಡಿತ್ತು. ಆದರೆ 9 ಬಾರಿಯೂ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಬಂಧನದ ಭೀತಿಯಲ್ಲಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಿಕ್ ಬ್ಯಾಕ್ ನೀಡಿದ ವ್ಯಕ್ತಿ ಕೇಜ್ರಿವಾಲ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದು ಇಡಿ ಆರೋಪ. ಇದಕ್ಕೆ ಮೊದಲು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಕೂಡಾ ಇದೇ ರೀತಿ ವಿಚಾರಣೆಗೆ ಸತತವಾಗಿ ತಪ್ಪಿಸಿಕೊಂಡಿದ್ದರು. ಬಳಿಕ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದರು. ಇದೀಗ ಕೇಜ್ರಿವಾಲ್ ಕೂಡಾ ಅದೇ ರೀತಿ ಬಂಧನಕ್ಕೊಳಗಾಗಿದ್ದಾರೆ.