Publish Date: Mon, 18 Aug 2025 (08:37 IST)
Updated Date: Mon, 18 Aug 2025 (08:40 IST)
ನವದೆಹಲಿ: ಜಗದೀಪ್ ಧನ್ಕರ್ ದಿಡೀರ್ ರಾಜೀನಾಮೆ ಬಳಿಕ ಈಗ ಭಾರತದ ಹೊಸ ಉಪರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಇದಕ್ಕಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ತನ್ನ ಅಭ್ಯರ್ಥಿಯಾಗಿ ಸಿಪಿ ರಾಧಾಕೃಷ್ಣನ್ ಅವರ ಹೆಸರು ಘೋಷಣೆ ಮಾಡಿದೆ.ಅಷ್ಟಕ್ಕೂ ಸಿಪಿ ರಾಧಾಕೃಷ್ಣನ್ ಯಾರು? ಅವರ ಹಿನ್ನಲೆಯೇನು ತಿಳಿದುಕೊಳ್ಳಿ.
ಸಿಪಿ ರಾಧಾಕೃಷ್ಣನ್ ಪ್ರಸಕ್ತ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ತಮಿಳುನಾಡಿನವರು. 1957 ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ್ದಾರೆ. ಕಳೆದ ವರ್ಷ ಜುಲೈನಿಂದ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಕ್ಕೆ ಮೊದಲು ಅವರು ರಾಜಕೀಯ ರಂಗದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಅನುಭವಿ. ಜಾರ್ಖಂಡ್, ಪುದುಚೇರಿ, ತೆಲಂಗಾಣ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಅಪಾರ ಅನುಭವ ಅವರಿಗಿದೆ. ಎರಡು ಬಾರಿ ಲೋಕಸಭಾ ಸದಸ್ಯನಾಗಿದ್ದರು.
ಸಿಪಿ ರಾಧಾಕೃಷ್ಣನ್ ಮೂಲತಃ ಆರ್ ಎಸ್ಎಸ್ ಹಿನ್ನಲೆಯುಳ್ಳವರು. ಭಾರತೀಯ ಜನಸಂಘ ಮತ್ತು ಆರ್ ಎಸ್ಎಸ್ ಸಂಘಟನೆ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ್ದರು. ಈ ವೇಳೆ 93 ದಿನಗಳ ರಥಯಾತ್ರೆ ಕೈಗೊಂಡಿದ್ದರು. ಇದೀಗ ಎನ್ ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ವಿಪಕ್ಷ ಇಂಡಿಯಾ ಒಕ್ಕೂಟ ಇದುವರೆಗೆ ಅಭ್ಯರ್ಥಿಯ ಆಯ್ಕೆ ಮಾಡಿಲ್ಲ. ಸೆಪ್ಟೆಂಬರ್ 9 ರಂದು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ.