ವರದಕ್ಷಿಣೆ ತಡೆಗಾಗಿ ಸರ್ಕಾರ ಎಷ್ಟೇ ಕ್ರಮಗಳನ್ನು, ಕಾನೂನನ್ನು ಜಾರಿಗೆ ತಂದರೂ ಆ ಭೂತ ಮಾತ್ರ ಇನ್ನು ನರ್ತನವಾಡುತ್ತಲೇ ಇದೆ. ಇದಕ್ಕೆ ಸಾಕ್ಷಿಯಾಗಿ ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಸಂಪೂರ್ಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಮಹಿಳೆಯನ್ನು ಮನಬಂದಂತೆ ಥಳಿಸಿ, ಮಾನಸಿಕ ಹಿಂಸೆ ನೀಡಿ, ಅತ್ಯಾಚಾರವೆಸಗಿದ್ದಲ್ಲೇ ಆಕೆಯ ಹಣೆಯ ಮೇಲೆ 'ನಮ್ಮಪ್ಪ ಕಳ್ಳ' ಎಂದು ಅಳಿಸಲಾಗದ ಹಚ್ಚೆ ಹಾಕಿಸಲಾಗಿದೆ.
ಪೊಲೀಸರ ಪ್ರಕಾರ ಪೀಡಿತೆ ಅಲ್ವಾರ್ ಜಿಲ್ಲೆಯ ರೇನಿ ಗ್ರಾಮದ ಜಗನ್ನಾಥ್ ಎಂಬುವವರ ಜತೆ ಎರಡು ವರ್ಷದ ಹಿಂದೆ ಮದುವೆಯಾಗಿದ್ದಳು. ಮದುವೆಯಾಗಿ ಬಂದಾಗಿನಿಂದ ಆಕೆಯ ಗಂಡನ ಮನೆಯವರು 51,000 ಹಣ ತರುವಂತೆ ಹಿಂಸಿಸುತ್ತಿದ್ದರು. ಆದರೆ ತನ್ನ ತವರು ಮನೆಯವರಿಗೆ ಅದನ್ನು ವ್ಯವಸ್ಥೆ ಮಾಡಲಾಗಲಿಲ್ಲ ಎಂದಾಕೆ ಹೇಳಿದ್ದಾಳೆ.
6 ತಿಂಗಳವರೆಗೆ ಆಕೆ ಎಲ್ಲವನ್ನು ಸಹಿಸಿಕೊಂಡಿದ್ದಳು. ಆದರೆ ದಿನಗಳೆದಂತೆ ಆಕೆಯ ಪರಿಸ್ಥಿತಿ ಕೈ ಮೀರಿ ಹೋಗತೊಡಗಿತು. ಕೊನೆಗೊಂದು ದಿನ ಅವರು ಆಕೆಯ ಮೇನೆ ರೇಪ್ ಮಾಡಿ ಟ್ಯಾಟೂ ಹಾಕಿಸಿ ಆಕೆಯ ಕೈಯ್ಯಿಂದಲೇ ಕರೆ ಮಾಡಿಸಿ ಅವಳಪ್ಪನನ್ನು ಕರೆಸಿದ್ದಾರೆ. ಮಗಳ ಸ್ಥಿತಿಯನ್ನು ನೋಡಿ ಆಘಾತಕ್ಕೀಡಾದ ಅಪ್ಪ ಈಗ ಆ ಹಚ್ಚೆಗಳನ್ನು ಅಳಿಸಿ ಹಾಕಲು ಪ್ರಯತ್ನ ನಡೆಸಿದ್ದಾನೆ.
ವರದಕ್ಷಿಣೆ ಹಿಂಸೆ ನೀಡುತ್ತಿದ್ದ ನನ್ನ ಗಂಡನ ಮನೆಯವರು ತವರಿಂದ ಹಣ ತರಲಿಲ್ಲವೆಂದು ನನ್ನ ಹಣೆ , ಕೈ, ಮೈಮೇಲೆಲ್ಲಾ 'ನಮ್ಮಪ್ಪ ಕಳ್ಳ' ಎಂದು ಹಚ್ಚೆ ಹಾಕಿಸಿದರು. ಅಷ್ಟೇ ಅಲ್ಲದೇ ಮೂವರು ಸಹೋದರರು ಸೇರಿ ಅತ್ಯಾಚಾರವೆಸಗಿದರು ಎಂದು ಜೈಪುರದ ಬಳಿಯ ಅಂಬರ್ ನಿವಾಸಿಯಾಗಿರುವ ಸುಮಾರು 25 ವರ್ಷದ ಮಹಿಳೆ ಪೊಲೀಸರಲ್ಲಿ ದೂರು ನೀಡಿದ್ದಾಳೆ.