Publish Date: Sun, 28 Nov 2021 (09:14 IST)
Updated Date: Sun, 28 Nov 2021 (09:46 IST)
ದೆಹಲಿ : ನಾಳೆಯಿಂದ (ನ.29) ಲೋಕಸಭೆ ಚಳಿಗಾಲದ ಅಧಿವೇಶನ ನಡೆಯಲಿದೆ.
ಈ ನಿಮಿತ್ತ ಇಂದು ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷಗಳ ಸಭೆ ನಡೆಸಲಿದ್ದಾರೆ. ಚಳಿಗಾಲದ ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಈ ಸರ್ವಪಕ್ಷಗಳ ಸಭೆಯಲ್ಲಿ ಚರ್ಚೆಯಾಗಲಿದೆ. ಹಾಗೇ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಶಾಸಕಾಂಗ ಪಕ್ಷದ ನಾಯಕರ ಸಭೆ ಕರೆದಿದ್ದಾರೆ.
ಸದ್ಯದ ಮಟ್ಟಿಗೆ ಎಲ್ಲರ ಕಣ್ಣು ಇರುವುದು ಕೃಷಿ ಕಾಯ್ದೆಗಳ ರದ್ದತಿ ಮಸೂದೆ 2021ರ ಮೇಲೆ. ಕಳೆದ ವರ್ಷ ಮುಂಗಾರು ಅಧಿವೇಶನದಲ್ಲಿ ಅಂಗೀಕಾರವಾಗಿದ್ದ ಕೃಷಿ ಮಸೂದೆಗಳು ನಂತರ ಕಾಯ್ದೆಗಳಾಗಿ ರೂಪುಗೊಂಡಿದ್ದವು.
ಆದರೆ ಈ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಒಂದು ವರ್ಷದಿಂದಲೂ ರೈತರು ಹೋರಾಟ ನಡೆಸುತ್ತಿದ್ದರು. ಸರ್ಕಾರದ ಯಾವ ಭರವಸೆಗೂ ಬಗ್ಗದ ಅವರು, ಕೃಷಿ ಕಾಯ್ದೆಗಳನ್ನು ರದ್ದು ಮಾಡದ ವಿನಃ ನಾವು ಹೋರಾಟ ಹಿಂಪಡೆಯಲಾರವು ಎಂದಿದ್ದರು.
ಅದರ ಬೆನ್ನಲ್ಲೇ ನವೆಂಬರ್ 19ರಂದು ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಭರವಸೆ ನೀಡಿದ್ದರು. ಇದೀಗ ಅದನ್ನು ರದ್ದು ಮಾಡುವ ಬಿಲ್ ಕೂಡ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಮ್ಮ ಸಂಸದರಿಗೆ ವಿಪ್ ಕೂಡ ಜಾರಿ ಮಾಡಿವೆ.
ಯಾವುದೇ ಅಧಿವೇಶನ ಶುರುವಾಗುವುದಕ್ಕೂ ಮೊದಲು ಹೀಗೆ ಸರ್ವಪಕ್ಷಗಳ ಸಭೆ ನಡೆಯುವುದು ಶಿಷ್ಟಾಚಾರವಾಗಿದ್ದು, ಇಂದು ಕೂಡ ಅದೇ ಪ್ರಕಾರದಲ್ಲಿ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅಧಿವೇಶನದಲ್ಲಿ ಚರ್ಚೆಯ ವೇಳೆ, ಪ್ರಶ್ನೋತ್ತರ ವೇಳೆ ಸಮನ್ವಯತೆ ಕಾಪಾಡುವಂತೆ ಈ ಸಭೆಯಲ್ಲಿ ಪ್ರತಿಪಕ್ಷಗಳಿಗೆ ಆಡಳಿತ ಸರ್ಕಾರ ಮನವಿ ಮಾಡಲಿದೆ. ನಾಳೆಯಿಂದ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನ ಡಿಸೆಂಬರ್ 23ರವರೆಗೆ ಇರಲಿದೆ. ರಾಜ್ಯಸಭೆಯಲ್ಲೂ ಇದೇ ವೇಳೆ ಅಧಿವೇಶನ ನಡೆಯುವುದು.